ತುಮಕೂರು: ಮನೆಯೊಂದಕ್ಕೆ ಚಿರತೆ ನುಗ್ಗಿದ ಪರಿಣಾಮ ಭಯಗೊಂಡು ಮನೆಯವರೂ ಶೌಚಾಲಯದಲ್ಲಿ ಅಡಗಿಕೊಂಡಿರುವ ಘಟನೆ ಜಿಲ್ಲೆಯ ಜಯನಗರದ ಬಡಾವಣೆಯಲ್ಲಿ ನಡೆದಿದೆ.
ರಂಗನಾಥ ಎಂಬುವರ ಮನೆಗೆ ಇಂದು ಬೆಳಗ್ಗೆ ಸುಮಾರು 8 ಗಂಟೆಗೆ ಚಿರತೆಯೊಂದು ಏಕಾಏಕಿಯಾಗಿ ಮನೆಗೆ ನುಗ್ಗಿದೆ. ಚಿರತೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಂಗನಾಥವರ ಪತ್ನಿ ವನಜಾಕ್ಷಿ ಹಾಗೂ ಸೊಸೆ ವಿನೂತಾ ಶೌಚಾಲಯದಲ್ಲಿ ಅಡಗಿ ಕುಳಿತಿದ್ದಾರೆ.
ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸ್ಥಳಕ್ಕೆ ಆಗಮಿಸಿದೆ. ಈ ವೇಳೆ ವಾಚರ್ ಗೋವಿಂದರಾಜು ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಸದ್ಯಕ್ಕೆ ಚಿರತೆ ಮನೆಯಲ್ಲಿನ ಹಾಲ್ ನಲ್ಲಿ ಠಿಕಾಣಿ ಹೂಡಿದ್ದು, ಮನೆಯ ಇಬ್ಬರು ಸದಸ್ಯರು ಶೌಚಾಲಯಲ್ಲಿ ಬಂಧಿಯಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಜಯನಗರ ಪೊಲೀಸರು ಬಂದು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಚಿರತೆ ಸೆರೆ ಹಿಡಿಯಲು ಹಾಸನದಿಂದ ಅರವಳಿಕೆ ತಜ್ಞರು ಬಂದ ಬಳಿಕ ಕಾರ್ಯಾಚರಣೆ ಆರಂಭವಾಗಲಿದ್ದು, ಚಿರತೆ ಬಂದ ಸುದ್ದಿ ತಿಳಿದು ಸಾವಿರಾರು ಸಂಖ್ಯೆಯಲ್ಲಿ ಜನ ಮನೆಯತ್ತ ಬರುತ್ತಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸ ಸಾಹಸ ಪಡುತ್ತಿದ್ದಾರೆ.