ಕೊಪ್ಪಳ: ಗಂಗಾವತಿ ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ತಾಣವಾದ ಆನೆಗೊಂದಿಯಲ್ಲಿ ಕೊಪ್ಪಳ ಜಿಲ್ಲಾಡಳಿತದಿಂದ ಜನವರಿ 9 ಹಾಗೂ 10ರಂದು ನಡೆಸಲು ಉದ್ದೇಶಿಸಿರುವ ಆನೆಗೊಂದಿ ಉತ್ಸವ-20ರ ಟೀಸರ್ ಅನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ.
ವಿಜಯನಗರ ಸಾಮ್ರಾಜ್ಯದ ಮೊದಲ ರಾಜ್ಯಧಾನಿ ಎಂದು ಗುರುತಿಸಿಕೊಂಡಿರುವ, ಶಿಲಾಯುಗದ ಇತಿಹಾಸ ಹೊಂದಿದ ಹಾಗೂ ಪೌರಾಣಿಕೆ ಹಿನ್ನೆಲೆಯ ಆನೆಗೊಂದಿ ಹಾಗೂ ಸುತ್ತಲಿನ ಐತಿಹಾಸಕ ಸ್ಮಾರಕಗಳನ್ನು ಟೀಸರ್ ನಲ್ಲಿ ಸೇರಿಸಲಾಗಿದೆ. ಜೊತೆಗೆ ಸಣಾಪುರದ ಕಲ್ಲಿನನ ಸೇತುವೆ, ಬೋಟಿಂಗ್, ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟ, ತುಂಗಭದ್ರಾ ನದಿ ಸೇರಿದಂತೆ ಇನ್ನಿತರ ದೃಶ್ಯ ಹೀಗೆ ಚಿತ್ರಿಸಲಾಗಿದೆ.
ಉತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮಗಳ ಮಾಹಿತಿಯನ್ನೂ ಇದರಲ್ಲಿ ನೀಡಲಾಗಿದೆ. ನಾಡಿನ ಅನೇಕ ಕಲಾವಿದರು, ಕಲಾತಂಡಗಳು ಉತ್ಸವಕ್ಕೆ ಮೆರಗು ತರಲಿವೆ. ಅಷ್ಟೇ ಅಲ್ಲದೆ ಉತ್ಸವದಲ್ಲಿ ಸಾಂಪ್ರದಾಯಿಕ ಸ್ಪರ್ಧೆಗಳಾದ ಹಗ್ಗ ಜಗ್ಗಾಟ, ಕಬಡ್ಡಿ, ಮಲ್ಲಗಂಬ, ಕುಸ್ತಿ, ಕಲ್ಲುಗುಂಡು ಎತ್ತುವುದು, ಸಂಗ್ರಾಣಿ ಕಲ್ಲು ಎತ್ತುವುದು ಸೇರಿದಂತೆ ಅನೇಕ ಕ್ರೀಡೆಗಳು ನಡೆಯಲಿವೆ.