ಚಿಕ್ಕಮಗಳೂರು: ರೆಸಾರ್ಟ್ ರಾಜಕೀಯ ಮುಗಿಸಿ ಬಿಜೆಪಿಯವರು ಬರ ಅಧ್ಯಯನಕ್ಕೆ ಮುಂದಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಕೂಡ ಬರ ಅಧ್ಯಯನ ಆರಂಭಿಸಿದ್ದಾರೆ.
ಸಚಿವರು ಇಂದು ಕಡೂರು ತಾಲೂಕಿನ ಕೆ.ಬಿದರೆ ಗ್ರಾಮದಲ್ಲಿ ಬರ ಅಧ್ಯಯನ ನಡೆಸಿದರು. ಈ ವೇಳೆ ಈಗಲ್ಗನ್ ರೆಸಾರ್ಟಿನಲ್ಲಿ ಕಾಂಗ್ರೆಸ್ ಶಾಸಕರ ಹಲ್ಲೆ ಪ್ರಕರಣ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು. ಇದನ್ನು ಓದಿ: ಕಂಪ್ಲಿ ಗಣೇಶ್ ಕಣ್ಣಾ ಮುಚ್ಚಾಲೆ ಆಟ – ಮುಂಬೈನಲ್ಲಿ ಪೊಲೀಸರಿಗೆ ಚಳ್ಳೆಹಣ್ಣು!
ಗಣೇಶ್ ಹಲ್ಲೆ ಮಾಡಿರುವ ವಿಚಾರ ನನ್ನ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ನಾನು ಕೈಗಾರಿಕಾ ಮಂತ್ರಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತವಾರಿ ಸಚಿವ ಅಷ್ಟೇ. ಇದಕ್ಕೆ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಉತ್ತರ ಕೊಡುತ್ತಾರೆ ಎಂದು ಹಾರಿಕೆ ಉತ್ತರ ನೀಡಿದರು.
ನೀವು ಪ್ರಕರಣದ ವಿಚಾರಣೆಯ ಕಮಿಟಿಯಲ್ಲಿ ಇರುವುದಿಂದ ಕೇಳಿದ್ವಿ ಅಂತಾ ಮಾಧ್ಯಮದವರು ಹೇಳುತ್ತಿದ್ದಂತೆ, ನಾನು ಕಮಿಟಿಯ ಸದಸ್ಯನಾಗಿ ನಿಮಗೆ ಎಲ್ಲವನ್ನೂ ಹೇಳುವುದಕ್ಕೆ ಆಗುತ್ತಾ? ಇಲ್ಲಿ ನಿಂತು ಎಲ್ಲವನ್ನೂ ಹೇಳಲಿಕ್ಕೆ ಆಗುವುದಿಲ್ಲ. ವಿಚಾರಣೆ ನಡೆಸಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಾರಿಕೊಂಡರು.
ಈ ವೇಳೆ ಅಲ್ಲಿದ್ದ ಕೆಲ ಸ್ಥಳೀಯರು, ನೀವು ಬಂದು, ನೋಡಿ ವಾಪಾಸ್ ಹೋಗಿಬಿಡುತ್ತೀರಿ. ಆದರೆ ನಿಮ್ಮಿಂದ ನಮಗೆ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಹನಿ ನೀರಿಗೂ ಹಾಹಾಕಾರವಿದೆ. ನಿಮ್ಮ ಅಧ್ಯಯನದ ಪ್ರವಾಸಕ್ಕಿಂತ ನಮಗೆ ಶಾಶ್ವತ ನೀರಾವರಿ ಯೋಜನೆ ಬೇಕು ಎಂದು ಆಗ್ರಹಿಸಿದರು. ಮಧ್ಯಾಹ್ನ 1 ಗಂಟೆಗೆ ಬಂದು ಬರ ಅಧ್ಯಯನ ನಡೆಸಿದ ಸಚಿವರು ಎರಡು ಗಂಟೆಗೆ ವಾಪಾಸ್ ನಡೆದರು. ಸಚಿವರ ಅಲ್ಲಿಂದ ಹೋಗುತ್ತಿದ್ದಂತೆ ಕೆಲವರು, ಇವರು ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ ಅಷ್ಟೇ ಎಂದು ಆಕ್ರೋಶ ಹೊರ ಹಾಕಿದರು.
https://www.youtube.com/watch?v=F1q42m7oBuA
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv