ಕಾರವಾರ: ಅತೃಪ್ತ ಶಾಸಕರಿಗೆ ಗಂಡಸ್ತನ ಇದ್ದಿದ್ದರೆ ಸದನಕ್ಕೆ ಬಂದು ನಮ್ಮ ವಿರುದ್ಧ ಮತ ಹಾಕಬೇಕಿತ್ತು. ಚಕ್ಕಾಗಳ ರೀತಿಯಲ್ಲಿ ಮುಂಬೈನಲ್ಲಿ ಕುಳಿತಿದ್ದೇಕೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕಿಡಿ ಕಾರಿದ್ದಾರೆ.
ಕಾರವಾರದಲ್ಲಿ ಮಾತನಾಡಿದ ಅವರು ಸುಪ್ರೀಂಕೋರ್ಟಿನಲ್ಲಿ ಶಾಸಕರ ಅನರ್ಹತೆ ತಡೆ ಹಿಡಿಯುವ ಸಾಧ್ಯತೆ ಕಡಿಮೆಯಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮನ್ನು ಅನರ್ಹ ಮಾಡಲಾಗಿತ್ತು. ಆಗ ನಾವು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಆಗ ನೊಟೀಸ್ ನೀಡದೆ ಅನರ್ಹತೆ ಮಾಡಿದ್ದಾರೆ ಎನ್ನುವ ಒಂದೇ ಒಂದು ಕಾರಣಕ್ಕೆ ನಮ್ಮ ಅನರ್ಹತೆ ರದ್ದಾಗಿತ್ತು ಎಂದು ತಿಳಿಸಿದರು.
20 ದಿನಗಳ ಕಾಲ ಅನರ್ಹ ಶಾಸಕರ ರಾಜಕೀಯವನ್ನು ರಾಜ್ಯದ ಜನತೆ ನೋಡಿದ್ದಾರೆ. ಸುಪ್ರೀಂಕೋರ್ಟ್ ಶಾಸಕರ ಅನರ್ಹತೆಯನ್ನು ಎತ್ತಿ ಹಿಡಿಯಲಿದೆ. ಯಡಿಯೂರಪ್ಪನವರ ಸರ್ಕಾರ ಉಪ ಚುನಾವಣೆ ಆಗುವ ವರೆಗೆ ಮಾತ್ರ ಉಳಿಯುತ್ತದೆ. ಎಲ್ಲರಿಗೂ ಸಚಿವನಾಗುವ ಆಸೆಯಿದೆ ಅವರಲ್ಲೇ ಗಲಾಟೆಗಳಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಬೀಳಲಿದೆ ಎಂದು ಭವಿಷ್ಯ ನುಡಿದರು.