ಬೆಂಗಳೂರು: ಸಾರಿಗೆ ನೌಕರರು ಕರೆ ಕೊಟ್ಟ ಮುಷ್ಕರದ (Transport Employees strike) ಡೆಡ್ಲೈನ್ ಇಂದಿಗೆ ಅಂತ್ಯ ಆಗಲಿದೆ. ಮೇ 18ರಂದು ಸರ್ಕಾರದ ಜೊತೆಗಿನ ಸಂಧಾನ ವಿಫಲವಾದ ಬಳಿಕ, ಮತ್ತೆ ಬೇಡಿಕೆ ಈಡೇರಿಕೆ ನಿರ್ಧಾರದ ಭವಿಷ್ಯ ಸಿಎಂ ಅಂಗಳ ತಲುಪಿದ್ದು, ಸರ್ಕಾರ ಇಂದು (ಮೇ 19) ಸಭೆ ಮಾಡಿ ಮನವೊಲಿಕೆ ಮಾಡದಿದ್ದರೆ ರಾತ್ರಿಯಿಂದಲೇ ಮುಷ್ಕರ ಆರಂಭವಾಗುವ ಸಾಧ್ಯತೆ ಇದೆ.
ಕಾರ್ಮಿಕ ಇಲಾಖೆ ಜೊತೆ ನಡೆದ ಸಂಧಾನ ಸಭೆ ವಿಫಲವಾದ ಬಳಿಕ ಮುಷ್ಕರದ ಶುರುವಾಗುವ ಸಾಧ್ಯತೆ ದಟ್ಟವಾಗ್ತಿದೆ. ಸಂಧಾನ ಸಭೆಯಲ್ಲೂ ಮನವೊಲಿಕೆಗೆ ಸಾರಿಗೆ ನೌಕರ ಸಂಘಟನೆ ಮುಖಂಡರು ಬಗ್ಗಿರಲಿಲ್ಲ. ಪಟ್ಟು ಬಿಡದ ನೌಕರರು ಸರ್ಕಾರಕ್ಕೆ ಮತ್ತೊಂದು ಆಫರ್ ಕೂಡ ನೀಡಿದ್ದರು. ಅದರಂತೆ ಇಂದು ಡೆಡ್ಲೈನ್ಗೆ ಕೊನೆಯ ದಿನವಾಗಿರುವ ಕಾರಣ ಸರ್ಕಾರ ಮತ್ತೆ ಮಾತುಕತೆಗೆ ಬಂದು ಸಮಸ್ಯೆ ಬಗೆಹರಿಸಲಿ ಎಂದು ಆಗ್ರಹ ಮಾಡಿದ್ದಾರೆ. ಸದ್ಯ ಈ ಬಗ್ಗೆ ನಿರ್ಧಾರ ಸಿಎಂ ಕೈಯಲ್ಲಿರುವ ಕಾರಣ, ಸಿಎಂ ಇಂದು ಸಭೆ ಮಾಡಿ ಮನವೊಲಿಸುತ್ತಾರಾ ಅನ್ನೋದು ಸದ್ಯಕ್ಕಿರುವ ಪ್ರಶ್ನೆ. ಇದನ್ನೂ ಓದಿ: ಸರ್ಕಾರದ ಸಂಧಾನ ಸಭೆ ವಿಫಲ – ಬಸ್ ಬಂದ್ ಆಗೋದು ಫಿಕ್ಸ್
ಅತ್ತ ಸರ್ಕಾರದ ಮೂರು ವರ್ಷ ಪೂರ್ಣಗೊಂಡ ಸಂಭ್ರಮದ ಸಮಾರಂಭ ಕೂಡ ನಡೆಯುತ್ತಿದೆ. ಎಲ್ಲಾ ಸಚಿವರು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಸಂಭ್ರಮದ ನಡುವೆ ಸಿಎಂ ಸಭೆ ಮಾಡಿ, ನೌಕರರ ಮನವೊಲಿಸುತ್ತಾರಾ? ಅಥವಾ ಸಾರಿಗೆ ಸಚಿವರ ಹೆಗಲಿಗೆ ಜವಾಬ್ದಾರಿ ನೀಡುತ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.
ಬೇಡಿಕೆ ವಿಚಾರವಾಗಿ ಸರ್ಕಾರಕ್ಕೆ ನೌಕರರು ಮತ್ತೊಂದು ಆಫರ್ ಕೂಡ ಕೊಟ್ಟಿದ್ದಾರೆ. ಸಂಬಳ ಹೆಚ್ಚಳ ಆಗಬೇಕಿರುವ ಪರ್ಸೆಂಟೇಜ್ ವಿಚಾರದಲ್ಲಿ ನಗೋಶಿಯೇಷನ್ಗೆ ನಾವು ಸಿದ್ಧ ಇದ್ದೇವೆ. ಆದರೆ, ಹೆಚ್ಚಳ ಮಾಡಬೇಕಿರುವ ದಿನಾಂಕದಲ್ಲಿ ಮಾತ್ರ ಯಾವುದೇ ಬದಲಾವಣೆ ಇಲ್ಲ ಅನ್ನೋ ಷರತ್ತಿನ ಜೊತೆಗೆ, ಆಫರ್ ಕೂಡ ಕೊಟ್ಟಿದ್ದಾರೆ. ಸರ್ಕಾರ ಎಷ್ಟರಮಟ್ಟಿಗೆ ಇದನ್ನ ಒಪ್ಪಿಕೊಳ್ಳುತ್ತೆ ಅನ್ನೋದೇ ಕುತೂಹಲವಾಗಿದೆ.
ಒಂದೊಮ್ಮೆ ಮುಷ್ಕರ ಆರಂಭವಾದ್ರೆ ನಿಗಮಗಳು ಕೂಡ ಪ್ಲ್ಯಾನ್ ಬಿ ಜೊತೆ ತಯಾರಿ ನಡೆಸಿವೆ. ಈ ಮೂಲಕ ನೌಕರರಿಗೆ ಟಕ್ಕರ್ ಕೊಡಲು ಪ್ಲ್ಯಾನ್ ಮಾಡಿವೆ. ನಿಗಮಗಳಲ್ಲಿರುವ ಟ್ರೈನಿ ಸಿಬ್ಬಂದಿಗಳ ಜೊತೆ ಖಾಸಗಿ ಬಸ್ಗಳನ್ನು ಓಡಿಸಲು ತಯಾರಿ ಮಾಡಿಕೊಂಡಿದ್ದು, ಮುಷ್ಕರ ಎದುರಿಸೋಕೆ ನಾವು ಸಿದ್ದ ಎಂಬ ಸಂದೇಶ ನೀಡಿವೆ. ಇದನ್ನೂ ಓದಿ: ಕೆಲಸ ಮಾಡದಿದ್ರೆ ವೇತನ ಇಲ್ಲ: ಮುಷ್ಕರಕ್ಕೆ ಸಿದ್ಧವಾಗಿರೋ ಸಾರಿಗೆ ನೌಕರರಿಗೆ KSRTC ವಾರ್ನಿಂಗ್

