ಬೆಂಗಳೂರು: ಕರ್ನಾಟಕ ಪೊಲಿಟಿಕಲ್ ಲೀಗ್ ಕ್ಲೈಮ್ಯಾಕ್ಸ್ ಶನಿವಾರ ವಿಧಾನಸಭೆಯಲ್ಲಿ ನಡೆಯಲಿದೆ. ಚುನಾವಣೆ ನಡೆದ ಬಳಿಕ ಬಹುಮತ ಸಾಬೀತು/ ವಿಫಲಗೊಳಿಸಲು ರಾಜಕೀಯ ಪಕ್ಷಗಳು ನಡೆಸಿದ ತಂತ್ರಗಳು ಫಲ ಕೊಡುತ್ತಾ ಎನ್ನುವ ಪ್ರಶ್ನೆಗೆ ನಾಳೆ ಉತ್ತರ ಸಿಗಲಿದೆ.
ಸುಪ್ರೀಂ ನಿರ್ದೇಶನದಂತೆ ಸಿಎಂ ಬಿಎಸ್ವೈ ವಿಶ್ವಾಸ ಮತಯಾಚನೆ ಮಾಡಲಿರುವ ಕಾರಣ ಕಲಾಪ ಹೇಗೆ ನಡೆಯಬಹುದು ಎಂದು ತಿಳಿಯುವ ಕುತೂಹಲ ಬಹಳ ಮಂದಿಯಲ್ಲಿದೆ. ಹೀಗಾಗಿ ನಾಳೆಯ ಕಲಾಪ ಹೇಗೆ ನಡೆಯುತ್ತದೆ ಎನ್ನುವ ವಿವರವನ್ನು ಪಬ್ಲಿಕ್ ಟಿವಿಗೆ ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಅವರು ನೀಡಿದ್ದಾರೆ.
14 ನೇ ವಿಧಾನಸಭೆಯನ್ನ ರಾಜ್ಯಪಾಲರು ವಿಸರ್ಜನೆ ಮಾಡಿದ್ದು, 15 ನೇ ವಿಧಾನಸಭೆ ನಾಳೆ ಬೆಳಗ್ಗೆ 11 ಗಂಟೆಗೆ ನಿಗಧಿಯಾಗಿದೆ. ಈ ಬಗ್ಗೆ ರಾಜ್ಯಪಾಲರಿಂದ ಸೂಚನೆ ಬಂದಿದೆ. ಆಯ್ಕೆಯಾದ 222 ಮಂದಿಗೆ ಸಮನ್ಸ್ ಕಳಿಸಲಾಗುತ್ತಿದೆ. ಮೆಸೇಜ್, ವ್ಯಾಟ್ಸ್ ಅಪ್ ಮೇಲ್ ಮೂಲಕ ಸಂದೇಶ ಕಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇಂದು ಕೆಜಿ ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ರಾಜ್ಯಪಾಲರು ಸಂಜೆ 3.40 ವೇಳೆಗೆ ಪ್ರಮಾಣ ವಚನ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಹಂಗಾಮಿ ಸ್ಪೀಕರ್ ಅವರು ಸದನವನ್ನು ನಡೆಸಲಿದ್ದಾರೆ. ನಾಳೆ 4 ಗಂಟೆಯೊಳಗೆ ಬಹುಮತ ಸಾಬೀತುಪಡಿಸಬೇಕು ಎಂಬ ನಿರ್ದೇಶನ ಬಂದಿದೆ. ಅದ್ದರಿಂದ ಆ ವೇಳೆಗೆ ಮೊದಲೇ ಚುನಾವಣೆಯಲ್ಲಿ ಗೆದ್ದ ಮಂದಿಗೆ ಪ್ರಮಾಣ ವಚನ ನೀಡಲಾಗುತ್ತದೆ. ಜನಪ್ರತಿನಿಧಿಗಳು ತನ್ನ ಗುರುತಿನ ಚೀಟಿ ಹಾಗೂ ಚುನಾವಣೆಯಲ್ಲಿ ಗೆದ್ದ ಪ್ರಮಾಣ ಪತ್ರ ತರಬೇಕು.
ಜನಪ್ರತಿನಿಧಿಗಳು ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ವಿಪ್ ಅನ್ವಯ ಆಗುತ್ತೆ. ಸಿಎಂ ಮೊದಲು ಒಂದು ಪ್ರಸ್ತಾವನೆಯನ್ನು ಮಂಡನೆ ಮಾಡುತ್ತಾರೆ. ಬಹುಮತ ನೀಡಬೇಕು ಎಂದು ಮನವಿ ಮಾಡುತ್ತಾರೆ. ಬಳಿಕ ಪ್ರಸ್ತಾವನೆಯನ್ನು ಮತಕ್ಕೆ ಹಾಕಲಾಗುತ್ತದೆ. ಮತಕ್ಕೆ ಹಾಕಿದ ನಂತರ ಪ್ರಸ್ತಾವನೆಯ ಪರ ವಿರೋಧ ಇರುವವರನ್ನು ಎದ್ದು ನಿಲ್ಲಲು ಹೇಳಲಾಗುತ್ತದೆ. ಬಳಿಕ ಅವರನ್ನ ಲೆಕ್ಕ ಹಾಕಲಾಗುತ್ತದೆ. ಇದರ ಆಧಾರದ ಮೇಲೆ ಪ್ರಸ್ತಾವನೆ ಅಂಗೀಕಾರ ಅಥವಾ ತಿರಸ್ಕಾರ ಆಗಿದೆ ಎನ್ನುವುದನ್ನು ಸ್ಪೀಕರ್ ಘೋಷಣೆ ಮಾಡುತ್ತಾರೆ. ಶಾಸನ ಸಭೆಯಲ್ಲಿ ಸಂಖ್ಯಾ ಆಧಾರದಲ್ಲಿ ಬಹುಮತದ ಸಂಖ್ಯೆ ನಿರ್ಧಾರ ಆಗುತ್ತೆ ಎಂದು ಮೂರ್ತಿ ಸವಿವರವಾಗಿ ಮಾಹಿತಿ ನೀಡಿದರು.