ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya Election) ಜಿಲ್ಲೆಯ ರಾಜಕೀಯ ಸಂಪೂರ್ಣ ವಿಭಿನ್ನ. ಈ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯದ ನಾಯಕರದ್ದೇ ಪಾರುಪತ್ಯವಾಗಿದೆ. ಈ ಜಿಲ್ಲೆಯಲ್ಲಿ ಸದ್ಯ 7 ಕ್ಷೇತ್ರಗಳಲ್ಲಿ ಪುರುಷ ನಾಯಕತ್ವ ಇದೆ, ಆದರೆ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಮಹಿಳಾ ನಾಯಕತ್ವ ಗಣನೀಯವಾಗಿ ಇತ್ತು. ಜಿಲ್ಲೆಯ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರು ಸ್ಪರ್ಧೆ ಮಾಡುವುದರ ಜೊತೆಗೆ ಗೆಲುವಿನ ನಗೆಯನ್ನು ಬೀರುತ್ತಿದ್ರು.
ವಿಧಾನಸಭಾ ಚುನಾವಣೆ (Vidhanasabha Election) ಗೆ ಸಂಬಂಧಿಸಿದಂತೆ ಜಿಲ್ಲೆಯ ಮಟ್ಟಿಗೆ ಶ್ರೀರಂಗಪಟ್ಟಣ ಕ್ಷೇತ್ರದಿಂದ ಹೆಚ್ಚು ಮಹಿಳೆಯರು ಶಾಸಕಿಯರಾಗಿ ಆಯ್ಕೆಯಾಗಿದ್ದಾರೆ. ಅದರಲ್ಲೂ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಅವರು ಮೂರು ಬಾರಿ ಆಯ್ಕೆಯಾಗಿರುವುದು ವಿಶೇಷ. ಪುರುಷರೇ ಸ್ಪರ್ಧಿಸಿ ಜಯಗಳಿಸುತ್ತಿದ್ದ ಕ್ಷೇತ್ರದಲ್ಲಿ ಮೊದಲ ಬಾರಿಗೆ ಅಂದರೆ 1972ರಲ್ಲಿ ದಮಮಂತಿ ಬೋರೇಗೌಡ 7,139 ಮತಗಳ ಅಂತರದಿಂದ ಗೆದ್ದು ಶಾಸಕಿಯಾಗಿ ಆಯ್ಕೆಯಾಗುತ್ತಾರೆ. ನಂತರ 1986ರಲ್ಲಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ, 1989ರಲ್ಲಿ ದಮಯಂತಿ ಬೋರೇಗೌಡ, 1994ರಲ್ಲಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ, 1999ರಲ್ಲಿ ಪಾರ್ವತಮ್ಮ ಶ್ರೀಕಂಠಯ್ಯ, 2004ರಲ್ಲಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ ಶಾಸಕಿಯಾಗಿ ಆಯ್ಕೆಯಾಗಿದ್ದು ಇತಿಹಾಸ.
- Advertisement 2
- Advertisement 3
ಮದ್ದೂರು ವಿಧಾನಸಭಾ ಕ್ಷೇತ್ರ (Maddur Vidhanasabha Constituency) ದಿಂದ 1984ರಲ್ಲಿ ಜಯವಾಣಿ ಮಂಚೇಗೌಡ, 2009ರಲ್ಲಿ ಕಲ್ಪನಾ ಸಿದ್ದರಾಜು, ಮಂಡ್ಯ ವಿಧಾನಸಭಾ ಕ್ಷೇತ್ರದಿಂದ 1997ರಲ್ಲಿ ಪ್ರಭಾವತಿ ಜಯರಾಂ, ಮಳವಳ್ಳಿ ಕ್ಷೇತ್ರದಿಂದ 1989ರಲ್ಲಿ ಮಲ್ಲಾಜಮ್ಮ ಹಾಗೂ ಈ ಹಿಂದೆ ಅಸ್ತಿತ್ವದಲ್ಲಿದ್ದ ಕಿರುಗಾವಲು ಕ್ಷೇತ್ರದಿಂದ 2004ರಲ್ಲಿ ಎಂ.ಕೆ.ನಾಗಮಣಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್ ಮಿಸ್- ಪುತ್ರನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ತಾಯಿ ಕಾಂತಾದೇವಿ
- Advertisement 4
ಜಿಲ್ಲೆಯ ಐದು ವಿಧಾನಸಭಾ(ಕಿರುಗಾವಲು ಸೇರಿದಂತೆ) ಕ್ಷೇತ್ರದಿಂದ ಎಂಟು ಮಹಿಳಾ ಶಾಸಕಿಯರಾಗಿ ಇತಿಹಾಸ ನಿರ್ಮಿಸಿರುವುದು ಒಂದೆಡೆಯಾದರೆ, ಮೇಲುಕೋಟೆ ಮತ್ತು ಕೆ.ಆರ್.ಪೇಟೆ, ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಈವರೆಗೆ ಮಹಿಳೆಯರು ಶಾಸಕಿಯರಾಗಿಲ್ಲ. ಜಿಲ್ಲೆಯಿಂದ 8 ಶಾಸಕಿಯರು ಆಯ್ಕೆಯಾಗಿ ವಿಧಾನಸಭೆ ಪ್ರವೇಶ ಮಾಡಿದ್ದರೂ, ಯಾರೊಬ್ಬರೂ ಸಚಿವ ಹುದ್ದೆ ಅಲಂಕರಿಸಿಲ್ಲ ಎನ್ನುವುದು ಗಮನಾರ್ಹ. ಆದರೆ 1994ರಲ್ಲಿ ಶಾಸಕಿಯಾಗಿ ಆಯ್ಕೆಯಾದ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಅವರು ಜೆ.ಎಚ್.ಪಟೇಲರ ಸರ್ಕಾರದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಮಳವಳ್ಳಿ ಕ್ಷೇತ್ರದ ಮಲ್ಲಾಜಮ್ಮ ಅವರು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದ್ದಾರೆ.