ಬೆಂಗಳೂರು: ಹಾಸನ ಕ್ಷೇತ್ರದ ಟಿಕೆಟ್ ಗೊಂದಲ ಇನ್ನೂ ಕಗ್ಗಂಟಾಗಿದೆ. ಇಂದು ದೇವೇಗೌಡರ ನಿವಾಸದಲ್ಲಿ ಹಾಸನದ ಮುಖಂಡರ ಸಭೆಯನ್ನು ದೇವೇಗೌಡ (HD Deve Gowda) ನಡೆಸಿದರು.
ಸಭೆಯಲ್ಲಿ ಕೆಲವು ಮುಖಂಡರು ಭವಾನಿ ರೇವಣ್ಣಗೆ (Bhavani Revanna) ಟಿಕೆಟ್ ಕೊಡುವಂತೆ ಒತ್ತಾಯ ಮಾಡಿದರು. ಭವಾನಿ ರೇವಣ್ಣಗೆ ಕೊಡದೇ ಹೋದರೂ ರೇವಣ್ಣರನ್ನೆ ಹಾಸನದಿಂದ (Hassan) ನಿಲ್ಲಿಸಿ ಎಂದು ಮುಖಂಡರು ಒತ್ತಾಯ ಮಾಡಿದರು.
ಸಭೆಯಲ್ಲಿ ಮುಖಂಡರಿಗೆ ದೇವೇಗೌಡರು ಕಿವಿಮಾತು ಹೇಳಿದ್ದಾರೆ. ಹಾಸನ ಕ್ಷೇತ್ರದಲ್ಲಿ ಪರಿಶೀಲನೆ ಮಾಡಿಯೇ ಟಿಕೆಟ್ ನೀಡುತ್ತೇವೆ. ಹೆಚ್.ಡಿ ರೇವಣ್ಣ ಹೊಳೆನರಸೀಪುರದಿಂದ ಸ್ಪರ್ಧಿಸುತ್ತಾರೆ. ಎರಡೂ ಕ್ಷೇತ್ರದಲ್ಲಿ ರೇವಣ್ಣ (HD Revanna) ಚುನಾವಣೆಗೆ ನಿಲ್ಲುವುದಿಲ್ಲ. ನಮಗೆ ಹಾಸನ ಕ್ಷೇತ್ರ ಉಳಿಸಿಕೊಳ್ಳುವುದಷ್ಟೇ ಗುರಿ. ಹಾಸನ ಕ್ಷೇತ್ರಕ್ಕೆ ಟಿಕೆಟ್ ಯಾರಿಗೆ ಕೊಡಬೇಕು ಎನ್ನುವುದನ್ನು ನಿರ್ಧಾರ ಮಾಡುತ್ತೇನೆ. ಎಲ್ಲರೂ ಬೆಂಬಲಿಸುವಂತೆ ಸಭೆಯಲ್ಲಿ ಮನವಿ ಮಾಡಿದರು.
ಹಾಸನ ರಾಜಕಾರಣ ನನಗೆ 40 ವರ್ಷದಿಂದ ಗೊತ್ತಿದೆ. ಗೆಲ್ಲುವ ಅಭ್ಯರ್ಥಿ ಹಾಗೂ ಕಾರ್ಯಕರ್ತರಿಗೆ ಟಿಕೆಟ್ ಕೊಡುತ್ತೇವೆ. ದಯವಿಟ್ಟು ಒತ್ತಡ ತರಬೇಡಿ ಎಂದ ದೇವೇಗೌಡರು ಮನವಿ ಮಾಡಿದರು.
ಸಭೆ ಬಳಿಕ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಪಕ್ಷದ ಕೆಲ ಮುಖಂಡರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಗೌಡರಿಗೆ ಆರೋಗ್ಯ ಸರಿಯಿಲ್ಲ. ಬೆಂಬಲಿಗರು ಬೇಡಿಕೆ ಇಟ್ಟಿದ್ದಾರೆ. ಸೂಕ್ತ ನಿರ್ಣಯ ಆಗುತ್ತದೆ. ಆದರೆ ಇಂತಹದ್ದೆ ನಿರ್ಣಯ ಆಗುತ್ತೆ ಎಂದು ಹೇಳುವುದಕ್ಕೆ ಆಗಲ್ಲ ಎಂದರು. ಇದನ್ನೂ ಓದಿ: ದೇವೇಗೌಡರ ಕುಟುಂಬ ಯಾರನ್ನೂ ಬೆಳೆಯಲು ಬಿಡಲ್ಲ- ಜೆಡಿಎಸ್ ವಿರುದ್ಧ ನಾರಾಯಣಗೌಡ ವಾಗ್ದಾಳಿ
ಹಾಸನ ಟಿಕೆಟ್ ವಿಚಾರ ಇನ್ನೂ ಚರ್ಚೆಯ ಹಂತದಲ್ಲೇ ಇದೆ. ಎಲ್ಲರೂ ಒಗ್ಗೂಡಿ ಒಂದೇ ತೀರ್ಮಾನ ಆಗಿರುತ್ತದೆ. ಅದಕ್ಕೆ ಎಲ್ಲರೂ ಬದ್ಧ. ಈಗ ನಡೆದ ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ. 2 ದಿನ ಕಾದು ನೋಡೋಣ ಎಂದು ಹೇಳಿದರು. ಇದನ್ನೂ ಓದಿ: ಮಾಜಿ ಶಾಸಕ ಎ.ಟಿ ರಾಮಸ್ವಾಮಿ ಬಿಜೆಪಿಗೆ ಸೇರ್ಪಡೆ