– ಎಐಸಿಸಿ ಅಧ್ಯಕ್ಷರ ಬಳಿ ಸಚಿವ ಸ್ಥಾನಕ್ಕೆ ಬೇಡಿಕೆಯಿಟ್ಟ ಅಜಯ್ ಸಿಂಗ್, ಎಂ.ಕೃಷ್ಣಪ್ಪ
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ (Karnataka Cabinet Expansion) ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar), ಡಿಸಿಎಂ ಜಿ.ಪರಮೇಶ್ವರ್ (G.Parameshwara) ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಸದಾಶಿವನಗರದಲ್ಲಿರುವ ನಿವಾಸದಲ್ಲಿ ಖರ್ಗೆ ಅವರನ್ನು ಸಿಎಂ ಮತ್ತು ಡಿಸಿಎಂ ಭೇಟಿಯಾದರು. ಮೊನ್ನೆ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ನಡೆದ ಸಂಪುಟ ವಿಸ್ತರಣೆ ಕುರಿತ ಮಾತುಕತೆ ವೇಳೆ ಖರ್ಗೆ ತುರ್ತಾಗಿ ಬೆಂಗಳೂರಿಗೆ ವಾಪಸ್ ಆಗಿದ್ದರು. ಇದನ್ನೂ ಓದಿ: 11 ಮಾಜಿ ಸಚಿವರ ಹೆಸರು ಸಂಪುಟ ವಿಸ್ತರಣೆ ಪಟ್ಟಿಯಲ್ಲಿ ನೋಡಿ ಹೈಕಮಾಂಡ್ ಗರಂ
ಹಿರಿಯ 11 ಮಾಜಿ ಸಚಿವರ ಹೆಸರಿಗೆ ಹೈಕಮಾಂಡ್ ವಿರೋಧ ಹಿನ್ನೆಲೆಯಲ್ಲಿ ಅದರ ಬಗ್ಗೆ ಎಐಸಿಸಿ ಅಧ್ಯಕ್ಷರ ಜೊತೆ ಸಿಎಂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. 11 ಜನರ ಪಟ್ಟಿಯಲ್ಲಿ ಯಾರನ್ನು ಕೈಬಿಡಬಹುದು? ಅಲ್ಲದೇ, ಉಳಿದ 32 ಹೆಸರುಗಳಲ್ಲಿ ಆಧ್ಯತೆ ಯಾರಿಗೆ ಕೊಡಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆದಿರುವ ಸಾಧ್ಯತೆಯಿದೆ.
ಸಿಎಂ ಹಾಗೂ ಮಾಜಿ ಸಿಎಂ ಇಬ್ಬರು ಸೇರಿ ಸಿದ್ಧಪಡಿಸಿದ ಪಟ್ಟಿಯಲ್ಲಿ 11 ಜನ ಹಿರಿಯ ಮಾಜಿ ಸಚಿವರ ಹೆಸರಿತ್ತು. ಅದರಲ್ಲಿ ಶೇ.50 ರಷ್ಟು ಕಡಿತ ಮಾಡಲು ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ಹಿರಿಯ 11 ಶಾಸಕರಲ್ಲಿ ಯಾರನ್ನು ಕೈಬಿಡಬೇಕು ಎಂಬ ನಿರ್ಧಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಗಲಿಗಿದೆ. ರಾಹುಲ್ ಗಾಂಧಿ ಜೊತೆಗಿನ ಚರ್ಚೆಯಲ್ಲಿ ಯಾರ ಹೆಸರು ಕೈ ಬಿಡಬೇಕು ಎಂಬ ತೀರ್ಮಾನವನ್ನು ಖರ್ಗೆ ಮಾಡಲಿದ್ದಾರೆ. ಇದನ್ನೂ ಓದಿ: ಮುಂದಿನ ವಾರ ಸಂಪುಟ ವಿಸ್ತರಣೆ ಫಿಕ್ಸ್ – ಹೈಕಮಾಂಡ್ನಿಂದ 60:40 ಫಾರ್ಮುಲಾ
ಇತ್ತ ಶಾಸಕ ಅಜಯ್ ಸಿಂಗ್ ಕೂಡ ಖರ್ಗೆ ಅವರನ್ನು ಭೇಟಿಯಾಗಿದ್ದಾರೆ. ತಮ್ಮನ್ನು ಸಚಿವ ಸ್ಥಾನಕ್ಕೆ ಪರಿಗಣಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಶಾಸಕ ಎಂ.ಕೃಷ್ಣಪ್ಪ ಕೂಡ ಎಐಸಿಸಿ ಅಧ್ಯಕ್ಷರ ಬಳಿ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದಾರೆ.
