ಮುಂಬೈ: ವ್ಯಕ್ತಿಯೋರ್ವ ತನ್ನ ತಂದೆಯನ್ನೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ.
ಆರೋಪಿಯನ್ನು ಗೋವಿಂದ್ ನಗರದ ನಿವಾಸಿ ನಿಖಿಲ್ ಶುಕ್ಲಾ ಎಂದು ಗುರುತಿಸಲಾಗಿದೆ. ನಿಖಿಲ್ ಗಾಂಜಾ ಸೇದುತ್ತಿದ್ದರಿಂದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ನಿಖಿಲ್ ಆಗಾಗ ಎಲ್ಲರೂ ಸಾಯಬೇಕು. ಮತ್ತೆ ಮನುಷ್ಯ ಜೀವನ ಸಿಗುವುದಿಲ್ಲ ಅಂತೆಲ್ಲಾ ಹೇಳುತ್ತಿದ್ದ ಎಂದು ನಿಖಿಲ್ ಅವರ ಕಿರಿಯ ಸಹೋದರ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಜನಸಂಖ್ಯೆ ಹೆಚ್ಚಿಸಲು ಕ್ರಮ – ಸರ್ಕಾರದಿಂದಲೇ ಯುವಕ, ಯುವತಿಯರಿಗೆ ಆನ್ಲೈನ್ ಡೇಟಿಂಗ್ ವ್ಯವಸ್ಥೆ
ಮಾದಕ ದ್ರವ್ಯ ವ್ಯಸನನಾಗಿದ್ದ ನಿಖಿಲ್ ಅನ್ನು ಆರು ತಿಂಗಳಿನಿಂದ ಮನೆಯಿಂದ ಹೊರಗೆ ಬಿಟ್ಟಿರಲಿಲ್ಲ. ಆದರೆ ತಂದೆಯೊಂದಿಗೆ ಜಗಳವಾಡಿ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಈ ವೇಳೆ ತಂದೆಯನ್ನು ರಕ್ಷಿಸಲು ಹೋದ ಅಜ್ಜನ ಮೇಲೂ ರಾಡ್ನಿಂದ ಹಲ್ಲೆ ನಡೆಸಿದ್ದಾನೆ. ಆದರೆ ಅದೃಷ್ಟವಶಾತ್ ತಾಯಿ ಹಾಗೂ ಸಹೋದರ ನಿಖಿಲ್ ಅನ್ನು ತಡೆದಿದ್ದರಿಂದ ಅಜ್ಜನ ಪ್ರಾಣ ಉಳಿದಿದೆ. ಇದೀಗ ಘಟನೆಯಲ್ಲಿ ಗಾಯಗೊಂಡಿರುವ ನಿಖಿಲ್ ತಾಯಿ ಹಾಗೂ ಅಜ್ಜನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ) ಮನೀಶ್ ಸೋಂಕರ್ ಹೇಳಿದ್ದಾರೆ.
ಘಟನೆಯ ನಂತರ ಆರೋಪಿ ಪರಾರಿಯಾಗಿದ್ದು, ಕೃತ್ಯವೆಸಗಲು ಬಳಸಿದ್ದ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಫೋರೆನ್ಸಿಕ್ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ನಿಖಿಲ್ ವಿರುದ್ಧ ಸಹೋದರ ಪ್ರಕರಣ ದಾಖಲಿಸಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ಕಸ್ತೂರಿ ರಂಗನ್ ವರದಿ ಸ್ಥಳಕ್ಕೆ ಭೇಟಿ ನೀಡಿ ಮಾಡಿದ ವರದಿಯಲ್ಲ, ಸಂಪೂರ್ಣ ಅವೈಜ್ಞಾನಿಕ: ಆರ್.ವಿ ದೇಶಪಾಂಡೆ