-ಬಿಸಿಎಂ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ವಿದ್ಯಾರ್ಥಿನಿಯರ ಆಗ್ರಹ
ಕಲಬುರಗಿ: ವಸತಿ ನಿಲಯದಲ್ಲಿರುವ ವಿದ್ಯಾರ್ಥಿನಿಯರಿಗೇ ರಕ್ಷಣೆ ನೀಡಬೇಕಾದ ಬಿಸಿಎಂ ಇಲಾಖೆ ಅಧಿಕಾರಿಯೇ ಅವರಿಗೆ ವಿಲನ್ ಆಗಿರುವ ಘಟನೆ ನಗರದಲ್ಲಿ ನಡೆದಿದೆ.
ಬಿಸಿಎಂ ಅಧಿಕಾರಿ ಮೆಹಬೂಬ್ ಸಾಬ್ ಕಾರಟಗಿ ಈ ಹಿಂದೆ ಶಾದಿ ಮಹಲ್ ಗೋಲ್ಮಾಲ್ ನಡೆಸಿ ನಂತರ ವಿದ್ಯಾರ್ಥಿನಿಯರನ್ನು ಲಾಡ್ಜ್ ಗೆ ಶಿಫ್ಟ್ ಮಾಡಿ ಸುದ್ದಿಯಲ್ಲಿದ್ದ. ಆದರೆ ಇದೀಗ ಮೆಹಬೂಬ್ ಸಾಬ್ನ ಮತ್ತೊಂದು ಮುಖ ಸಹ ಬಯಲಾಗಿದೆ. ಅಧಿಕಾರಿಯ ಅಸಭ್ಯ ವರ್ತನೆ ವಿರುದ್ಧ ವಸತಿ ನಿಲಯದ ವಿದ್ಯಾರ್ಥಿನಿಯರು ಅಸಮಾಧಾನ ಹೊರ ಹಾಕಿದ್ದಾರೆ.
ಸಂಜೆಯಾದರೆ ಸಾಕು ಮೆಹಬೂಬ್ ಸಾಬ್ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಬಲವಂತವಾಗಿ ನುಗ್ಗುತ್ತಾನಂತೆ. ಈ ವೇಳೆ ವಿದ್ಯಾರ್ಥಿನಿಯರ ಕೋಣೆಗೆ ನುಗ್ಗಿ ತನ್ನ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿ ವಿಕೃತ ಅಟ್ಟಹಾಸ ಮೇರೆಯುತ್ತಿದ್ದಾನೆ. ಇದನ್ನು ವಿರೋಧಿಸಿದರೆ, ನಾನು ಹಿರಿಯ ಅಧಿಕಾರಿ ಅಂತ ವಿದ್ಯಾರ್ಥಿನಿಯರಿಗೇ ಏಕವಚನದಲ್ಲಿ ಅಸಭ್ಯ ಪದಗಳಿಂದ ನಿಂದಿಸುತ್ತಾನೆ. ಹೀಗಾಗಿ ಈ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಬೇಕು ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.
ಮೆಹಬೂಬ್ ಸಾಬ್ ವಿರುದ್ಧ ಈ ಹಿಂದೆಯೂ ಸಹ ಮೇಲೆ ಹಲವು ಆರೋಪಗಳು ಕೇಳಿ ಬಂದಿದ್ದವು. ಆದರೆ ತನ್ನ ಅಧಿಕಾರ ಹಾಗೂ ರಾಜಕಾರಣಿಗಳ ಪ್ರಭಾವ ಬಳಸಿ ಎಲ್ಲಾ ಪ್ರಕರಣ ಮುಚ್ಚಿ ಹಾಕಿದ್ದಾನೆ. ಈ ಬಾರಿ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಹೋಗಿ ವಿಡಿಯೋ ಚಿತ್ರಿಕರಿಸುವದನ್ನು, ಕಲಬುರಗಿ ಜಿಲ್ಲಾ ಪಂಚಾಯತ್ ಸಿಇಓ ಪಿ.ರಾಜಾ ಸಹ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ನಿಟ್ಟಿನಲ್ಲಿ ಓರ್ವ ಮಹಿಳಾ ಅಧಿಕಾರಿಯನ್ನು ತನಿಖೆಗೆ ನೇಮಿಸಿ, ಮೆಹಬೂಬ್ ಸಾಬ್ ವಿರುದ್ಧ ಬಂದಿರುವ ದೂರಿನಗಳ ವರದಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ.
ಮೆಹಬೂಬ್ ಸಾಬ್ ಕಳೆದ ಬಾರಿ ಮಾಜಿ ಸಚಿವ ಜಮೀರ್ ಅಹ್ಮದ್ ಅವರ ಸಹಾಯದಿಂದ ತನ್ನ ಹುದ್ದೆಯನ್ನು ಉಳಿಸಿಕೊಂಡಿದ್ದ ಎನ್ನಲಾಗಿದೆ. ಆದರೆ ಈಗ ಯಾರ ಪ್ರಭಾವ ಬಳಸಿ ಸೇಫ್ ಆಗುತ್ತಾನೆ ಎಂಬ ಚರ್ಚೆ ಶುರುವಾಗಿದೆ.