ಚಿಕ್ಕಮಗಳೂರು: ನಿವೇಶನ ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಪುರಸಭೆ ಮುಖ್ಯಾಧಿಕಾರಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ.
ಕಡೂರಿನ ಪುರಸಭೆ ಮುಖ್ಯಾಧಿಕಾರಿ ಎಚ್.ಎನ್.ಮಂಜುನಾಥ್, ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಇದನ್ನೂ ಓದಿ: ಇಂದು ಸಂಜೆಯೇ ನಟ ಪುನೀತ್ ಅಂತ್ಯಕ್ರಿಯೆ
ಕಡೂರಿನ ವೆಂಕಟೇಶ್ವರ ನಗರದ ನಿವಾಸಿ ರಘು ಎಂಬವರು ತಮ್ಮ ಪತ್ನಿಗೆ ದಾನವಾಗಿ ಬಂದಿದ್ದ ನಿವೇಶನವನ್ನು ಖಾತೆ ಮಾಡಿ ಕೊಡುವಂತೆ ಪುರಸಭೆಗೆ ಅರ್ಜಿ ಹಾಕಿದ್ದರು. ನಿವೇಶನದ ಖಾತೆ ಮಾಡಿಕೊಡಲು ಆರಂಭದಲ್ಲಿ ಮಂಜುನಾಥ್ ಅವರು 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕಡೆಗೆ ರಘು ಗೋಗರೆದಿದ್ದಕ್ಕೆ 10 ಸಾವಿರ ನೀಡುವಂತೆ ಹೇಳಿದ್ದರು. ಆದರೆ, ರಘು ಈ ಮಾಹಿತಿಯನ್ನು ಎಸಿಬಿ ಅಧಿಕಾರಿಗಳ ಗಮನಕ್ಕೆ ತಂದು, ದೂರು ನೀಡಿದ್ದರು.
ಶುಕ್ರವಾರ ರಘು ಪುರಸಭಾ ಕಚೇರಿಯಲ್ಲಿ ಮುಖ್ಯಾಧಿಕಾರಿ ಮಂಜುನಾಥ್ಗೆ 10 ಸಾವಿರ ರೂ. ಹಣ ನೀಡುತ್ತಿದ್ದರು. ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ಹಣದ ಸಮೇತ ಮಂಜುನಾಥ್ ಅವರನ್ನ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪುರಸಭೆ ಕಚೇರಿ ಬಾಗಿಲು ಮುಚ್ಚಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಪುರಸಭೆ ನೌಕರರನ್ನೂ ಹೊರಬಿಡದ ಎಸಿಬಿ ಅಧಿಕಾರಿಗಳು ಸಂಜೆವರೆಗೂ ಪರಿಶೀಲನೆ ನಡೆಸಿದರು. ನಂತರ ಅವರನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಇದನ್ನೂ ಓದಿ: ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ
ಎಸಿಬಿ ಡಿವೈಎಸ್ಪಿ ಗೀತಾ, ಇನ್ಸ್ಪೆಕ್ಟರ್ ಮಂಜುನಾಥ್, ಎಸಿಬಿ ತನಿಖಾಧಿಕಾರಿ ದೇವರಾಜು, ಅರ್ಪಿತಾ, ಸತೀಶ್, ವೇದಾವತಿ, ಪ್ರಸಾದ್, ಜಯಕುಮಾರ್, ರವಿಚಂದ್ರ ಹಾಗೂ ಅನಿಲ್ ಇದ್ದರು.