ಜೈಪುರ: ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಅಮಾನತುಗೊಂಡಿದ್ದ ನ್ಯಾಯಾಧೀಶರೊಬ್ಬರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.
ಜಿತೇಂದ್ರ ಸಿಂಗ್ ಬಂಧಿತ ಆರೋಪಿ. ಇವರನ್ನು ಜೈಪುರದಿಂದ ಭಾರತ್ಪುರಕ್ಕೆ ಕರೆತರಲಾಗಿದೆ. ಸಿಂಗ್ ಅವರು ಭ್ರಷ್ಟಾಚಾರ ವಿರೋಧಿ ಪ್ರಕರಣಗಳ ವಿಶೇಷ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಗರ್ಲ್ಫ್ರೆಂಡ್ ಜೊತೆ ವಧು ಪರಾರಿ- ಪತಿಗೆ ಹೃದಯಾಘಾತ
ಆರೋಪಿ ಸಿಂಗ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ನ್ಯಾಯಾಧೀಶರ ಸ್ಟೆನೋಗ್ರಾಫರ್ ಅಂಶುಲ್ ಸೋನಿ ಹಾಗೂ ನ್ಯಾಯಾಲಯದ ಸಿಬ್ಬಂದಿ ರಾಹುಲ್ ಕತಾರ ಮತ್ತಿಬ್ಬರು ಆರೋಪಿಗಳಾಗಿದ್ದಾರೆ.
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಸಿಂಗ್ ಅವರನ್ನು ವಿಚಾರಣೆಗೊಳಪಡಿಸಲಾಯಿತು. ನಂತರ ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ವಯ ಅವರನ್ನು ಬಂಧಿಸಲಾಯಿತು ಎಂದು ಭಾರತ್ಪುರ ಎಸ್ಪಿ ದೇವೇಂದ್ರ ಕುಮಾರ್ ಬಿಶ್ನೋಯ್ ತಿಳಿಸಿದ್ದಾರೆ. ಇದನ್ನೂ ಓದಿ: ಲಂಡನ್ನಿಂದ ಬರೋ ಉಡುಗೊರೆಗೆ ಆಸೆಪಟ್ಟು 4.49 ಲಕ್ಷ ರೂ. ಕಳ್ಕೊಂಡ್ರು!
14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಜಿತೇಂದ್ರ ಸಿಂಗ್ ವಿರುದ್ಧ ಆರೋಪ ಕೇಳಿಬಂದಿತ್ತು. ಎಫ್ಐಆರ್ ಆಧರಿಸಿ ರಾಜಸ್ಥಾನ್ ಕೋರ್ಟ್ ಆರೋಪಿಯನ್ನು ಅಮಾನತುಗೊಳಿಸಿತ್ತು. ಅಲ್ಲದೇ ಪ್ರಕರಣದ ತನಿಖೆಗೆ ತಂಡವೊಂದನ್ನು ನೇಮಿಸಿತ್ತು.
ಸಿಂಗ್ ಹಾಗೂ ಇಬ್ಬರು ಇತರೆ ಆರೋಪಿಗಳು ತನ್ನ ಮಗನಿಗೆ ಕಳೆದ ಒಂದು ತಿಂಗಳಿಂದ ಮಾದಕ ವಸ್ತುಗಳನ್ನು ನೀಡಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ವಿಚಾರವನ್ನು ಯಾರೊಂದಿಗಾದರೂ ಹೇಳಿದರೆ ನಿನ್ನ ಕುಟುಂಬವನ್ನು ಸುಳ್ಳು ಪ್ರಕರಣಗಳಡಿ ಸಿಲುಕಿಸಲಾಗುವುದು ಎಂದು ಹೆದರಿಸಿದ್ದಾರೆಂದು ಸಂತ್ರಸ್ತ ಬಾಲಕನ ತಾಯಿ ದೂರು ನೀಡಿದ್ದರು.
ಜಿತೇಂದ್ರ ಸಿಂಗ್ ಕೂಡ ಬಾಲಕನ ಕುಟುಂಬಸ್ಥರ ವಿರುದ್ಧ ಬ್ಲ್ಯಾಕ್ಮೇಲ್ ಮತ್ತು ಸುಲಿಗೆ ಪ್ರಕರಣವನ್ನು ದಾಖಲಿಸಿದ್ದಾರೆ.
ಸಿಂಗ್ ಅವರು ಭಾರತ್ಪುರ ಜಿಲ್ಲಾ ಕ್ಲಬ್ನಲ್ಲಿ ಟೆನಿಸ್ ಆಡುವಾಗ ಹುಡುಗನಿಗೆ ಪರಿಚಯವಾಗಿದ್ದರು ಎನ್ನಲಾಗಿದೆ.