ನಾಗ್ಪುರ: ಸ್ಥಳೀಯ ಪತ್ರಕರ್ತರೊಬ್ಬರ ತಾಯಿ ಹಾಗೂ ಒಂದು ವರ್ಷದ ಮಗಳನ್ನು ಕೊಲೆಗೈದು ಬಳಿಕ ಶವವನ್ನು ಚೀಲದಲ್ಲಿ ತುಂಬಿಸಿ ಬಿಸಾಕಿರೋ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಪತ್ರಕರ್ತ ರವಿಕಾಂತ್ ಕಂಬ್ಳೆ ಅವರ 52 ವರ್ಷದ ಉಷಾ ಕಂಬ್ಳೆ ಹಾಗೂ ರಾಶಿ ದುಷ್ಕರ್ಮಿಗಳ ಕೈಯಲ್ಲಿ ಹತ್ಯೆಗೀಡಾದ ಮೃತ ದುರ್ದೈವಿಗಳು.
ಏನಿದು ಘಟನೆ?: ಸ್ಥಳೀಯ ದೈನಂದಿನ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿರೋ ರವಿಕಾಂತ್ ಅವರ ತಾಯಿ ಮತ್ತು ಮಗಳು ಭಾನುವಾರ ಸಂಜೆಯಿಂದಲೇ ನಾಪತ್ತೆಯಾಗಿದ್ದರು. ಆದ್ರೆ ಇದೀಗ ಅವರಿಬ್ಬರೂ ಶವವಾಗಿ ಸುಲ್ಲಾದ ಬಹದೂರ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಸುಮಾರು 10.30ರ ವೇಳೆಗೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಷಾ ಅವರು ಸಾಲ ನೀಡುವ ವ್ಯವಹಾರ ಮಾಡುತ್ತಿದ್ದರು ಎಂದು ಪೊಲೀಸ್ ಆಯುಕ್ತ ನಿಲೇಶ್ ಭಾರ್ನೆ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.
ಎಲ್ಲಿಂದ ನಾಪತ್ತೆ?: ತನ್ನ ಒಂದು ವರ್ಷದ ಮೊಮ್ಮಗಳೊಂದಿಗೆ ಉಷಾ ಅವರು ಭಾನುವಾರ ಸಂಜೆ 5.30ರ ಸುಮಾರು ಮನೆಯ ಪಕ್ಕದಲ್ಲಿರೋ ಜ್ಯುವೆಲ್ಲರಿ ಶಾಪ್ ಗೆ ತೆರಳಿದ್ದರು. ಹಾಗೆಯೇ ತೆರಳಿದವರು ತಡವಾದ್ರೂ ಬರದಿದ್ದಾಗ ಉಷಾ ಪತಿ ಕರೆ ಮಾಡಿದ್ದಾರೆ. ಆದ್ರೆ ಅದಾಗಲೇ ಉಷಾ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ಮಗ ರವಿಕಾಂತ್ ಕೆಲಸದಿಂದ ವಾಪಾಸ್ಸಾಗಿ ತಾಯಿ ಮತ್ತು ಮಗಳು ನಾಪತ್ತೆಯಾಗಿರೋ ವಿಚಾರ ಪೊಲೀಸರಿಗೆ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗ್ಪುರದ ಪವನ್ ಪುತ್ರ ಪ್ರದೇಶದ 26 ವರ್ಷದ ಗಣೇಶ್ ರಂಬಾರಣ್ ಶಾಹು ಎಂಬಾತನನನು ಬಂಧಿಸಲಾಗಿದೆ. ಈತ ಭಾನುವಾರ ಸಂಜೆಯಷ್ಟೇ ಹಣದ ವಿಚಾರವಾಗಿ ಉಷಾ ಅವರ ಜೊತೆ ಜಗಳವಾಡಿದ್ದನು ಎಂದು ಜಂಟಿ ಪೊಲೀಸ್ ಕಮಿಷನರ್ ಶಿವಾಜಿ ತಿಳಿಸಿದ್ದಾರೆ.
ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಈ ವೇಳೆ ಉಷಾ ಅವರು ಮೆಟ್ಟಿಲಿನಿಂದ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ ಶಾಹಿ ಉಷಾ ಅವರ ಕುತ್ತಿಗೆಯನ್ನು ಸೀಳಿದ್ದಾನೆ. ಇದೇ ವೇಳೆ ಉಷಾ ಜೊತೆಯಿದ್ದ ಮೊಮ್ಮಗಳು ರಾಶಿಯನ್ನು ಕೂಡ ಕೊಲೆಗೈದಿದ್ದಾನೆ. ನಂತರ ಅವರಿಬ್ಬರ ಶವವನ್ನು ಒಂದು ಚೀಲದೊಳಗೆ ತುಂಬಿಸಿ ನುಲ್ಲಾ ಪ್ರದೇಶದಲ್ಲಿ ಬಿಸಾಕಿದ್ದಾನೆ ಅಂತ ವಿಚಾರಣೆ ನಡೆಸಿದಾಗ ಬಂಧಿತ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.