ಉಡುಪಿ: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರ ಹುಟ್ಟುಹಬ್ಬವನ್ನು ಉಡುಪಿಯಲ್ಲಿ ಆಚರಿಸಲಾಯಿತು. ಜಿಲ್ಲಾ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ವಿಶೇಷ ಮಕ್ಕಳ ಜೊತೆ ತಮ್ಮ ನಾಯಕ ಎಚ್ಡಿಕೆ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು.
ನಗರದ ಆಶಾ ನಿಲಯ ವಿಶೇಷ ಮಕ್ಕಳ ಜೊತೆ ಕೇಕ್ ಕತ್ತರಿಸಿದ ಜೆಡಿಎಸ್ ಮುಖಂಡರು ಕುಮಾರಸ್ವಾಮಿಗೆ ಶುಭ ಕೋರಿದರು. ಕೇಕ್ ಕತ್ತರಿಸಿದ ಬಳಿಕ ಮಕ್ಕಳಿಗೆ ಭೋಜನದ ವ್ಯವಸ್ಥೆಯನ್ನೂ ಜೆಡಿಎಸ್ ವತಿಯಿಂದ ಆಯೋಜಿಸಲಾಗಿತ್ತು. ಜಿಲ್ಲಾ ಜೆಡಿಎಸ್ ಮುಖಂಡರು ಪ್ರತಿ ವರ್ಷ ಒಂದೊಂದು ಸಂಸ್ಥೆಗಳಲ್ಲಿ ಎಚ್ಡಿಕೆ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬಂದಿದ್ದಾರೆ. ಹೀಗಾಗಿ ಈ ಬಾರಿ ಆಶಾ ನಿಲಯವನ್ನು ದಳ ನಾಯಕರು ಎಚ್ಡಿಕೆ ಹುಟ್ಟುಹಬ್ಬ ಆಚರಣೆ ಮಾಡಲು ಆಯ್ಕೆ ಮಾಡಿಕೊಂಡಿದ್ದರು.
ಈ ಬಗ್ಗೆ ಮಾತನಾಡಿದ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಎಚ್ಡಿಕೆ ಅವರು ಇನ್ನಷ್ಟು ವರ್ಷ ಜನ ಸೇವೆ ಮಾಡಬೇಕು. ಮಕ್ಕಳ ಆಶೀರ್ವಾದದಿಂದ ನೂರು ವರ್ಷ ಕುಮಾರಸ್ವಾಮಿ ಆರೋಗ್ಯದಿಂದಿರಬೇಕು. ಈ ಹಿಂದೆ ಎರಡು ಬಾರಿ ಸಣ್ಣ ಅವಧಿಗೆ ರಾಜ್ಯದ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದ್ದಾರೆ. ಮತ್ತೊಮ್ಮೆ ಸುದೀರ್ಘ ಅವಧಿಗೆ ಜನಸೇವೆ ಮಾಡುವ ಅವಕಾಶವನ್ನು ದೇವರು ಅವರಿಗೆ ಕರುಣಿಸಲಿ ಎಂದು ಶುಭ ಹಾರೈಸಿದರು.