– ತುಮಕೂರಲ್ಲಿ ಜೆಡಿಎಸ್ ಕ್ಷೀಣಿಸುತ್ತಿರುವುದು ನಿಜ
– ಕ್ಯಾಬಿನೆಟ್ ಸಭೆ ನಂತರ ಕೆಲವು ಬದಲಾವಣೆ
ತುಮಕೂರು: ಸಂಪುಟ ಪುನಾರಚನೆ ಮಾಡುವ ವಿಚಾರ ಗೊತ್ತಿಲ್ಲ. ಆದರೆ ಖಾಲಿ ಇದ್ದ ಸ್ಥಾನಗಳನ್ನು ಭರ್ತಿ ಮಾಡುತ್ತಾರೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗ ಸಚಿವ ಸ್ಥಾನ ಖಾಲಿ ಬಿಡಬಾರದು. ಹಾಗಾಗಿ ಭರ್ತಿ ಮಾಡಬಹುದು ಎಂದ ಅವರು, ಇದೇ ತಿಂಗಳ 27ಕ್ಕೆ ಕ್ಯಾಬಿನೆಟ್ ಸಭೆ ಇದೆ. ಅದಾದ ಬಳಿಕ ಕೆಲ ನಿರ್ಧಾರ ಆಗಬಹುದು. ಜೊತೆಗೆ ಉಸ್ತುವಾರಿ ಸಚಿವರ ನೇಮಕ ಕೂಡ ಇದೇ ಸಭೆಯಲ್ಲಿ ನಿರ್ಧಾರ ಆಗಬಹುದು. ಆದರೆ ನಿಗಮ ಮಂಡಳಿಯ ಪುನಾರಚನೆ ಇಲ್ಲ. ಬದಲಾಗಿ ಖಾಲಿ ಇರುವ 18-20 ಸ್ಥಾನಗಳು ಭರ್ತಿಯಾಗಬಹುದು ಎಂದು ತಿಳಿಸಿದರು.
ಸಿಎಂ ಬೊಮ್ಮಾಯಿ ಮುಂದುವರಿಯುತ್ತಾರೆ ಎಂಬ ವಾತಾವರಣವಿದೆ. ಅದನ್ನು ಹೊರತುಪಡಿಸಿ ಬೇರೆ ಏನೂ ಗೊತ್ತಿಲ್ಲ ಎಂದ ಅವರು, ಸಿದ್ದರಾಮಯ್ಯರ ಹೇಳಿಕೆಗೆ ದನಿಗೂಡಿಸಿ, ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಕ್ಷೀಣಿಸುತ್ತಿರುವುದು ನಿಜ. ನಾನು ಎಂಎಲ್ಸಿ ಚುನಾವಣೆಯಲ್ಲೇ ಈ ಬಗ್ಗೆ ಹೇಳಿದ್ದೆ. ಜೆಡಿಎಸ್ ನಾಯಕರಾದ ಗುಬ್ಬಿ ಶಾಸಕ ಶ್ರೀನಿವಾಸ್, ಮಾಜಿ ಎಂಎಲ್ಸಿ ಬೆಮೆಲ್ ಕಾಂತರಾಜು ಕಾಂಗ್ರೆಸ್ಗೆ ಹೋಗೋದು ಕೂಡ ಜೆಡಿಎಸ್ ಕ್ಷೀಣಿಸುತ್ತಿರುವ ಸಂಕೇತವಾಗಿದೆ. ಇದು ಜೆಡಿಎಸ್ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ. ಆದರೆ ಅದರ ಲಾಭವನ್ನು ಕಾಂಗ್ರೆಸ್ ಅವರು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಬೆಳಗಾವಿಯ ಗೌಪ್ಯ ಸಭೆ ಬಿಜೆಪಿ ಅಧಿಕೃತ ಸಭೆಯಲ್ಲ: ಬಾಲಚಂದ್ರ ಜಾರಕಿಹೊಳಿ
ಇದೇ ಸಂದರ್ಭದಲ್ಲಿ ಬಿಜೆಪಿಯ ಕುರಿತು ಮಾತನಾಡಿದ ಅವರು, ನಮ್ಮಲ್ಲಿ ಕೆಲ ಆಂತರಿಕ ಭಿನ್ನಾಭಿಪ್ರಾಯ ಇರಬಹುದು. ಅದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಲ್ಲ. ಹಾಗಾಗಿ ಪಕ್ಷಕ್ಕೆ ಯಾವುದೇ ತೊಂದರೆ ಇಲ್ಲ. ಇದರಿಂದ ಬಿಜೆಪಿಯಲ್ಲಿ ಯಾರೂ ವಲಸೆ ಹೋಗುವ ಸಾಧ್ಯತೆ ಇಲ್ಲ. ಹಾಗಾಗಿ ನಮಗೆ ಆತಂಕ ಅಷ್ಟಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಂಪುಟ ಪುನಾರಚನೆ ವರಿಷ್ಠರು ನಿರ್ಧರಿಸುತ್ತಾರೆ: ಬೊಮ್ಮಾಯಿ