ಶಿವಮೊಗ್ಗ: ಮಾಜಿ ಸಂಸದ, ಮಾಜಿ ಸಚಿವ, ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರ ಆತ್ಮಕತೆ ಸಾಲ ಮೇಳದ ಸಂಗ್ರಾಮ ಆತ್ಮಕತೆಯಲ್ಲ ಅದೊಂದು ಸುಳ್ಳಿನ ಕಂತೆ ಎಂದು ಮಾಜಿ ಸಿಎಂ ಬಂಗಾರಪ್ಪ ಪುತ್ರ, ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಟೀಕಿಸಿದ್ದಾರೆ.
ಕೃತಿಯಲ್ಲಿ ಬಂಗಾರಪ್ಪ ಅವರು, ಇಂದಿರಾಗಾಂಧಿ ಅವರಿಗೆ ಅವಾಚ್ಯವಾಗಿ ಮಾತನಾಡಿದ್ದರು, ಒಮ್ಮೆ ಇಂದಿರಾಗಾಂಧಿ ಅವರ ಮೇಲೆ ಹಲ್ಲೆಗೂ ಯತ್ನಿಸಿದ್ದರು ಎಂದು ಬರೆದಿದ್ದಾರೆ. ಇದು ನಿಜವಾಗಿದ್ದರೆ ರಾಜೀವ್ ಗಾಂಧಿ ಬಂಗಾರಪ್ಪ ಅವರನ್ನು ಸಿಎಂ ಮಾಡುತ್ತಿರಲಿಲ್ಲ. ಇದು ಆತ್ಮಕತೆಯಲ್ಲ- ಸುಳ್ಳಿನ ಕಂತೆ. ಅದು ಆಟೋಬಯೋಗ್ರಫಿ ಅಲ್ಲ. ಅವರ ಪಾಪದ ಕೊಡ ಎಂದು ಮಧು ಹೇಳಿದ್ದಾರೆ.
ಬಂಗಾರಪ್ಪ ಅವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ:
ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಪೂಜಾರಿ ತಮ್ಮ ಆತ್ಮಕತೆಯಲ್ಲಿ ಬಂಗಾರಪ್ಪ ಅವರ ಬಗ್ಗೆ ಬರೆದಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಇದರಿಂದ ಬಂಗಾರಪ್ಪ ಅಭಿಮಾನಿಗಳಿಗೆ ನೋವಾಗಿದೆ. ಜನಾರ್ದನ ಪೂಜಾರಿ ಈಗ ಯಾವ ಸ್ಥಿತಿಯಲ್ಲಿ ಇದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅರಳು ಮರಳಾಗಿರಬಹುದು ಅಥವಾ ಅವರಿಗೆ ತಲೆಕೆಟ್ಟಿದೆ ಎಂದು ನಾನು ಹೇಳುವುದಿಲ್ಲ. ಬಂಗಾರಪ್ಪ ಅಧಿಕಾರದಿಂದ ಇಳಿದ ಮೇಲೆ ಕಾಂಗ್ರೆಸ್ಸಿಗರೇ ಅವರ ವಿರುದ್ದ ಕ್ಲಾಸಿಕ್ ಕಂಪ್ಯೂಟರ್ ಸೇರಿ ಮೂರು ಪ್ರಕರಣ ದಾಖಲಿಸಿದ್ದರು. ಈ ಎಲ್ಲಾ ಪ್ರಕರಣಗಳಲ್ಲೂ ಬಂಗಾರಪ್ಪ ನಿರ್ದೋಷಿ ಎಂದು ಕೋರ್ಟ್ ಖುಲಾಸೆಗೊಳಿಸಲಾಗಿದೆ. ಆದರೆ ಪೂಜಾರಿ ಬಂಗಾರಪ್ಪ ಭ್ರಷ್ಟಾಚಾರಿ ಎಂದು ಹೇಳಿದ್ದಾರೆ. ಇದು ನ್ಯಾಯಾಂಗ ನಿಂದನೆ ಆಗಲಿದೆ. ತಮ್ಮ ಕ್ಷೇತ್ರದಲ್ಲಿ ಕೋಮುಗಲಭೆ ತಡೆಯಲು ಯಾಕೆ ಸಾಧ್ಯವಾಗಿಲ್ಲ ಏಕೆ ಎಂಬುದನ್ನು ಮೊದಲು ಬರೆಯಿರಿ. ಅವರ ಪಕ್ಷದಲ್ಲಿ ಅವರಿಗೇ ಗೌರವ ಇಲ್ಲ. ಬೇರೆಯವರ ಮೇಲಿರುವ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಮಾನನಷ್ಟ ಮೊಕದ್ದಮೆ ಹಾಕುವುದಿಲ್ಲ. ಬಂಗಾರಪ್ಪ ಅವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು
ಸಾಲ ಮೇಳದ ಸಂಗ್ರಾಮದಲ್ಲಿ ಏನಿದೆ?:
ನಾನೊಮ್ಮೆ ಬಂಗಾರಪ್ಪ ಅವರನ್ನು ಇಂದಿರಾಗಾಂಧಿಯವರಿಗೆ ಪರಿಚಯ ಮಾಡುವ ಸಂದರ್ಭ ಇಂದಿರಾಗಾಂಧಿ ‘ಹೂ ಈಸ್ ದ್ಯಾಟ್ ಬಂಗಾರಪ್ಪ’ ಎಂದು ಕೇಳಿದ್ದರು. ಅವರು ‘ದೇವರಾಜ ಅರಸರ ಕ್ಯಾಬಿನೆಟ್ನಲ್ಲಿದ್ದಾರೆ’ ಎಂದು ಹೇಳಿ ಪರಿಚಯಿಸಿದ್ದೆ. ಇದಾದ ಬಳಿಕ 1980ರ ಕಾಲಘಟ್ಟದಲ್ಲಿ ಚುನಾವಣೆಗಿಂತ ಮೊದಲು ಗುಂಡೂರಾಯರನ್ನು ರಾಜ್ಯಕ್ಕೆ ಎಲೆಕ್ಷನ್ ಕಮಿಟಿ ಚೇರ್ಮನ್ ಆಗಿ ನೇಮಿಸಿ ಪ್ರಕಟಣೆ ಮಾಡಿದರು. ಅಷ್ಟರವರೆಗೆ ಬಂಗಾರಪ್ಪಗೆ ಮುಖ್ಯಮಂತ್ರಿಯಾಗುವ ಕನಸಿತ್ತು. ಈಗ ಗುಂಡೂರಾಯರನ್ನು ನೇಮಕ ಮಾಡಿದ್ದು ಅವರಿಗೆ ಶಾಕ್ ಹೊಡೆದಂತಾಯಿತು. ಈ ಸಂದರ್ಭ ಇಂದಿರಾಗಾಂಧಿಯನ್ನು ಕೆಟ್ಟಮಾತುಗಳಿಂದ ಬೈದರು.
ಆ ವೇಳೆ ಸಮಾಧಾನ ಹೇಳಿ ಸ್ವಲ್ಪ ದಿನ ಬಿಟ್ಟು ನಾನೊಮ್ಮೆ ಇಂದಿರಾಗಾಂಧಿ ಬಳಿ ಬಂಗಾರಪ್ಪ ಅವರನ್ನು ಕರೆದುಕೊಂಡು ಹೋದೆ. ಹೋದ ಕೂಡಲೇ ಬಂಗಾರಪ್ಪನವರು ಆರ್ಭಟ ಮಾಡಿದ್ದು, ನನಗೆ ಬಹಳ ಬೇಸರವಾಯಿತು. ಈ ಸಂದರ್ಭ ಇಂದಿರಾಗಾಂಧಿಯವರಿಗೆ ಹೊಡೆಯಲು ಹೋದರು. ನನಗೆ ಆಘಾತವಾಯಿತು. ಕೂಡಲೇ ಬಂಗಾರಪ್ಪರನ್ನು ಹಿಡಿದು ಹಿಂದಕ್ಕೆ ಎಳೆದೆ. ಇಂದಿರಾ ಹೆದರಿ ನಡುಗುತ್ತಿದ್ದರು. ಏನಾಗಿದೆ ನಿಮಗೆ? ತಲೆ ಸರಿ ಉಂಟಾ? ಹೋಗಿ ಹೊರಗೆ ನಿಲ್ಲಿ ಎಂದು ಹೇಳಿದೆ. ಆ ಬಳಿಕ ಇಂದಿರಾಗಾಂಧಿ ನನ್ನಲ್ಲಿ ‘ನನ್ನ ಮಕ್ಕಳು ಕೂಡಾ ಈ ರೀತಿ ಮಾಡಲಿಲ್ಲ. ಈ ರೀತಿ ಮಾಡಬಾರದಿತ್ತು,’ ಎಂದು ನೊಂದುಕೊಂಡರು ಅಂತಾ ಬರೆಯಲಾಗಿದೆ.