ಅಂದುಕೊಂಡಂತೆ ಆಗಿದ್ದರೆ ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್ ಗೆ ಅಮಿತಾಭ್ ಬಚ್ಚನ್ (Amitabh Bachchan) ಬರಬೇಕಿತ್ತು. ಅಲ್ಲದೇ, ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿತ್ತು. ಅನಿವಾರ್ಯ ಕಾರಣಗಳಿಂದಾಗಿ ಅವರು ಬರಲಿಲ್ಲ. ಹಾಗಂತ ಬಚ್ಚನ್ ಅಪ್ಪು ಅವರನ್ನು ನೆನಪಿಸಿಕೊಳ್ಳುವ ದಿನಗಳೇ ಇಲ್ಲವಂತೆ. ಅದರಲ್ಲೂ ಅಪ್ಪು ಇಲ್ಲ ಎನ್ನುವುದನ್ನು ಅವರಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆಯಂತೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
‘ಅಪ್ಪು (Puneet Rajkumar) ಇಲ್ಲ ಎಂಬುದನ್ನು ಅಂದುಕೊಂಡು ಮಾತನಾಡಲು ಕಷ್ಟ ಆಗುತ್ತದೆ. ಅಪ್ಪು ಮಗುವಾಗಿದ್ದಾಗಲೇ ನಾನು ಅವರನ್ನು ಮೊದಲು ನೋಡಿದ್ದು. ಅಪ್ಪುವಿನಲ್ಲಿ ಸದಾ ಸೆಳೆಯುವ ಸಂಗತಿ ಅಂದ್ರೆ ಅವರ ನಗು. ಎಲ್ಲಾ ಕಡೆ, ಎಲ್ಲಾ ಸಂದರ್ಭದಲ್ಲೂ, ಯಾವಾಗಲೂ ಅವರ ಮುಖದಲ್ಲಿ ನಗು ಇರುತ್ತದೆ. ಅಪ್ಪು ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಕೊನೆಯ ಚಿತ್ರ ಗಂಧದಗುಡಿಯಲ್ಲಿ ಅವರು ಅಭಿನಯಿಸಿಲ್ಲ. ಅವರು ಅವರಾಗಿಯೇ ಕಾಣಿಸ್ಕೊಂಡಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಕೇಳಿ ಬರಲಿದೆ ‘ಮೆಲ್ಲುಸಿರೆ ಸವಿಗಾನ’ ಹಾಡು
ಗಂಧದ ಗುಡಿಯ (Gandhad Gudi) ಬಗ್ಗೆ ಮಾತನಾಡಿರುವ ಬಿಗ್ ಬಿ ‘ಗಂಧದ ಗುಡಿಯಲ್ಲಿ ಕರ್ನಾಟಕ ವೈಭವದ ವನ್ಯ ಸಂಪತ್ತನ್ನು ತೆರೆದಿಟ್ಟಿದ್ದಾರೆ. ಅಪ್ಪು ಜೊತೆಗಿನ ಗಂಧದ ಗುಡಿ ಪಯಣ ಮಿಸ್ ಮಾಡ್ಕೋಬೇಡಿ. ಕಡ್ಡಾಯವಾಗಿ ಮಕ್ಕಳು ನೋಡಲೇಬೇಕಾದ ಸಿನಿಮಾ. ವನ್ಯ ಸಂಪತ್ತಿನ ಕುರಿತು ಅರಿಯ ಬೇಕಾದ ಚಿತ್ರ. ಅಪ್ಪು ನಮ್ಮ ಜೊತೆ ನಮ ನೆನಪಿನಲ್ಲಿ ಸದಾ ಜೀವಂತ’ ಎಂದು ಬರೆದಿದ್ದಾರೆ.
ಅಮಿತಾಭ್ ಬಚ್ಚನ್ ಮಾತನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಅಶ್ವಿನಿ (Ashwini Puneet) ಪುನೀತ್ ರಾಜ್ ಕುಮಾರ್, ಮೇರುನಟನಿಗೆ ಈ ಮೂಲಕ ಧನ್ಯವಾದಗಳನ್ನೂ ಅರ್ಪಿಸಿದ್ದಾರೆ. ಅಮಿತಾಭ್ ಮತ್ತು ಡಾ.ರಾಜ್ ಕುಟುಂಬ ಬಾಂಧವ್ಯ ಹಲವು ವರ್ಷಗಳದ್ದು. ಅನೇಕ ಬಾರಿ ಅಮಿತಾಭ್ ಮತ್ತು ರಾಜ್ ಕುಮಾರ್ ಭೇಟಿ ಮಾಡಿದ್ದಾರೆ. ಅಮಿತಾಭ್ ಅವರಿಗಾಗಿ ಡಾ.ರಾಜ್ ಕುಮಾರ್ ಮರೆಯದೇ ಇರುವಂತಹ ಸಹಾಯವನ್ನೂ ಮಾಡಿದ್ದಾರೆ. ಆ ಋಣವನ್ನು ಬಿಗ್ ಬಿ ಹೀಗೆ ತೀರಿಸಿದ್ದಾರೆ.