ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಪ್ರಮುಖ ಸಾಕ್ಷಿದಾರನಿಗೆ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ದರ್ಶನ್ (Darshan) ಅಭಿಮಾನಿ ಬಳಗದ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಇದೀಗ ಪ್ರಕರಣದ ಸಂಬಂಧ ಆರೋಪಿ ಪುನೀತ್ನ 5 ಮೊಬೈಲ್ಗಳನ್ನ ಪೊಲೀಸರು ವಶಕ್ಕೆ ಪಡೆದು ಮಾಹಿತಿ ಕಲೆಹಾಕುತ್ತಿದ್ದಾರೆ. ಈ ವೇಳೆ ಆರೋಪಿಗಳು ಸಾಕ್ಷ್ಯ ನಾಶಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.
ಪ್ರಕರಣದ ಪ್ರಮುಖ ಸಾಕ್ಷಿದಾರನಿಗೆ ಆರೋಪಿಗಳು ವಾಟ್ಸಾಪ್ ಕಾನ್ಫರೆನ್ಸ್ ಕರೆಯಲ್ಲಿ ಮಾತಾಡಿ, ವಕೀಲರು ಮಾತನಾಡುತ್ತಿರುವುದಾಗಿ ಹೇಳಿ ಬೆದರಿಕೆಯೊಡ್ಡಿದ್ದರು. ಸಾಕ್ಷಿಗೆ ಬೆದರಿಕೆ ಬಳಿಕ ಪೊಲೀಸರ ತನಿಖೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿರುವ ಆರೋಪಿಗಳು ಮೊಬೈಲ್ನಲ್ಲಿರುವ ಎಲ್ಲಾ ಮಾಹಿತಿಯನ್ನ ಡಿಲೀಟ್ ಮಾಡಿದ್ದರು. ಬಳಿಕ ಮತ್ತೆ ವಾಟ್ಸಾಪ್ ಇನ್ಸ್ಟಾಲ್ ಮಾಡಿದ್ದರು. ಸದ್ಯ ಪೊಲೀಸರು ಮೊಬೈಲ್ಗಳನ್ನ ವಶಕ್ಕೆ ಪಡೆದು ಎಫ್ಎಸ್ಎಲ್ಗೆ ರವಾನಿಸಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್ನ ಸಾಕ್ಷಿಗೆ ಬೆದರಿಕೆ – ತನಿಖೆ ವೇಳೆ ಕೆಲ ವಿಚಾರಗಳು ಬೆಳಕಿಗೆ

ಬೆದರಿಕೆ ಹಾಕಲು ಆರೋಪಿಗಳಿಗೆ ನಿರ್ಮಾಪಕರು ಸಾಥ್ ನೀಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ವಿಚಾರಣೆ ವೇಳೆ ಅನುಮಾನ ವ್ಯಕ್ತವಾಗಿದ್ದು, ನಿರ್ಮಾಪಕರ ಬಗ್ಗೆ ದಾಖಲೆ ಕಲೆ ಹಾಕಲು ಕಾಮಾಕ್ಷಿಪಾಳ್ಯ ಪೊಲೀಸರು ಮುಂದಾಗಿದ್ದಾರೆ. ಆರೋಪಿ ಪುನೀತ್ನ ಮೊಬೈಲ್ ರಿಟ್ರೀವ್ ಆದ ಬಳಿಕ ದಾಖಲೆಗಳು ಪತ್ತೆಯಾದರೆ ನಿರ್ಮಾಪಕರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ, ಐವರು ಆರೋಪಿಗಳ ಜಾಮೀನು ರದ್ದು ಮಾಡುವಂತೆ ಪೊಲೀಸರು ಸುಪ್ರೀಂಕೋರ್ಟ್ ಮೊರೆಹೋಗಿದ್ದಾರೆ. ಧನರಾಜ್, ಪುಟ್ಟಸ್ವಾಮಿ@ ಪವನ್, ರಾಘವೇಂದ್ರ, ನಂದೀಶ್, ವಿನಯ್ ವಿರುದ್ಧ ಅರ್ಜಿ ಸಲ್ಲಿಸಿದ್ದು, ಕೆಲವೇ ದಿನಗಳಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.
