ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ವಿಳಂಬದ ಬೆನ್ನಲ್ಲೇ, ತಿಪಟೂರು ಕ್ಷೇತ್ರದ ಹಿರಿಯ ಶಾಸಕ ಕೆ. ಷಡಕ್ಷರಿ(MLA K Shadakshari) ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಆಷಾಢ ಮಾಸದಲ್ಲಿ ಆಗದಿದ್ದರೆ, ಶ್ರಾವಣ ಮಾಸದಲ್ಲಾದರೂ ಆಗಿಯೇ ಆಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಯಾರೂ ಧೈರ್ಯ ಕಳೆದುಕೊಂಡಿಲ್ಲ ಅಥವಾ ಆತಂಕಕ್ಕೆ ಒಳಗಾಗಿಲ್ಲ. ಹೈಕಮಾಂಡ್ (Congress High Command) ಈಗಾಗಲೇ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದೆ ಎಂದು ತಿಳಿಸಿದರು.
ಸಚಿವ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಏನೆಲ್ಲಾ ಪ್ರಯತ್ನಗಳು ಮತ್ತು ಲಾಬಿಗಳು ನಡೆಯಬೇಕೋ, ಅವುಗಳೆಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿವೆ. ಅಂತಿಮವಾಗಿ ಹೈಕಮಾಂಡ್ ನಾಯಕರು ಸೂಕ್ತ ನಾಯಕರಿಗೆ ಅವಕಾಶ ನೀಡಲಿದ್ದಾರೆ. ಆಷಾಢ ಮುಗಿಯುವುದರೊಳಗೆ ವಿಸ್ತರಣೆ ಪ್ರಕ್ರಿಯೆ ನಡೆಯಲಿದೆ ಎಂಬ ಭರವಸೆ ನಮಗಿದೆ ಎಂದು ಷಡಕ್ಷರಿ ಹೇಳಿದರು. ಇದನ್ನೂ ಓದಿ: ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ 8 ನಿರ್ಣಯ; ರಾಮ ಮಂದಿರ ಟ್ರಸ್ಟ್ನಿಂದ ನೀಟ್ವರೆಗೆ ಕಾಂಗ್ರೆಸ್ ವಾಗ್ದಾಳಿ
ತಮಗೆ ಸಚಿವ ಸ್ಥಾನ ಸಿಗುವ ಬಗ್ಗೆ ಬಲವಾದ ವಿಶ್ವಾಸ ವ್ಯಕ್ತಪಡಿಸಿದ ಅವರು, ತಮ್ಮ ಹಿರಿಯತನ ಹಾಗೂ ಜಾತಿಸಮೀಕರಣದ ಲೆಕ್ಕಾಚಾರಗಳನ್ನು ಮುನ್ನೆಲೆಗೆ ತಂದಿದ್ದಾರೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮುದಾಯದಿಂದ ಆಯ್ಕೆಯಾಗಿರುವ ಪ್ರಮುಖ ನಾಯಕ ನಾನೊಬ್ಬನೇ ಇದ್ದೇನೆ. ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಅವರು ಲಿಂಗಾಯತ ಸಮುದಾಯದವರಾಗಿದ್ದರೂ, ಅವರು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ ಎಂದು ತಿಳಿಸಿದರು.
ನಾನು ಕಳೆದ 40 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದು, ಪಕ್ಷಕ್ಕಾಗಿ ದುಡಿದಿದ್ದೇನೆ. ನನ್ನ ಹಿರಿತನ ಮತ್ತು ಅನುಭವವನ್ನು ಪರಿಗಣಿಸಿ ಹೈಕಮಾಂಡ್ ಈ ಬಾರಿ ಖಂಡಿತವಾಗಿಯೂ ನನಗೆ ಸಚಿವ ಸ್ಥಾನ ನೀಡಿಯೇ ನೀಡುತ್ತದೆ ಎಂಬ ಅಚಲ ನಂಬಿಕೆ ಇದೆ ಎಂದು ಅವರು ಪ್ರತಿಪಾದಿಸಿದರು.
