ಬೆಂಗಳೂರು: ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ತುರುಸುನ ಸಿದ್ಧತೆ ನಡೆಸುತ್ತಿದ್ದು, ಈ ನಡುವೆ ಐಟಿ (IT) ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಬುಧವಾರ ಬೆಂಗಳೂರಿನ (Bengaluru) ಕೆಜಿಎಫ್ ಬಾಬು (KGF Babu) ಮನೆ ಸೇರಿದಂತೆ ರಾಜ್ಯಾದ್ಯಂತ 50 ಕಡೆಗಳಲ್ಲಿ ಐಟಿ ದಾಳಿ ನಡೆಸಿದೆ. ಈ ವೇಳೆ ಅಧಿಕಾರಿಗಳಿಗೆ ಅಕ್ರಮವಾಗಿ ಸಂಗ್ರಹಿಸಿಟ್ಟ ಕೋಟ್ಯಂತರ ಮೌಲ್ಯದ ವಸ್ತುಗಳು ದೊರಕಿವೆ.
ಕೆಜಿಎಫ್ ಬಾಬುಗೆ ಸಂಬಂಧಪಟ್ಟ ಬೆಂಗಳೂರಿನ ಹೈಗ್ರೌಂಡ್ ಬಳಿ ಇರುವ ರುಕ್ಸಾನಾ ಪ್ಯಾಲೆಸ್ ಮೇಲೆ ಬುಧವಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ 2,000ಕ್ಕೂ ಹೆಚ್ಚು ಡಿಮಾಂಡ್ ಡ್ರಾಫ್ಟ್ (ಡಿಡಿ), 5,000ಕ್ಕೂ ಹೆಚ್ಚು ರೇಶ್ಮೆ ಸೀರೆಗಳು ದೊರಕಿವೆ.
ಕೆಜಿಎಫ್ ಬಾಬು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಯಸಿ ಪ್ರಚಾರವನ್ನು ನಡೆಸಿದ್ದರು. ಆದರೆ ಕಾಂಗ್ರೆಸ್ನಿಂದ ಟಿಕೆಟ್ ಸಿಕ್ಕಿರದ ಕಾರಣ ಅವರ ಪತ್ನಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ಕೆಜಿಎಫ್ ಬಾಬು ಕಣಕ್ಕೆ ಇಳಿಸಿದ್ದಾರೆ. ಐಟಿ ದಾಳಿ ವೇಳೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ 1,925 ವೋಟರ್ ಐಡಿಗಳು ಪತ್ತೆಯಾಗಿವೆ. ಪ್ರತಿ ವೋಟರ್ ಐಡಿಗಳನ್ನು ತಲಾ 5,000 ರೂ. ಚೆಕ್ಗಳೊಂದಿಗೆ ಶೇಖರಿಸಿಡಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ವರಿಷ್ಠರ ಆಯ್ಕೆಯನ್ನು ಯಾರು ಪ್ರಶ್ನೆ ಮಾಡುವ ಹಾಗೆ ಇಲ್ಲ : ಈಶ್ವರಪ್ಪ
ನಿವಾಸದ ಮೊದಲ ಮಹಡಿಯ ಕೊಠಡಿಯಲ್ಲಿ ವೋಟರ್ ಐಡಿ ಹಾಗೂ ಚೆಕ್ಗಳು ದೊರೆತರೆ, ಮನೆಯ ನೆಲಮಹಡಿಯಲ್ಲಿ ಸುಮಾರು 26 ಬ್ಯಾಗ್ಗಳಲ್ಲಿ ಸೀರೆಗಳು ದೊರಕಿವೆ. ಸುಮಾರು 5,000 ಸೀರೆಗಳು ಪತ್ತೆಯಾಗಿದ್ದು, ಕಾಂಚಿಪುರಂ ರೇಷ್ಮೆ ಸೀರೆಗಳು ಇವಾಗಿವೆ ಎನ್ನಲಾಗಿದೆ.
ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಈ ಎಲ್ಲಾ ವಸ್ತುಗಳ ಮೇಲೆ ಕೆಜಿಎಫ್ ಬಾಬು ಅವರಿಂದ ಉಡುಗೊರೆ ಎಂದು ಬರೆಯಲಾಗಿದ್ದು, ಅವರ ಫೋಟೋಗಳು ಕೂಡಾ ಕಂಡುಬಂದಿದೆ. ಈ ಎಲ್ಲಾ ವಸ್ತುಗಳನ್ನು ಮತದಾರರಿಗೆ ಹಂಚಲು ಸಂಗ್ರಹಿಸಿಡಲಾಗಿದ್ದು, ಇದೀಗ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಹಿನ್ನೆಲೆ ಶಿವಾಜಿನಗರ ವಲಯ ಚುನಾವಣಾ ಉಸ್ತುವಾರಿಯಿಂದ ಹೈ ಗ್ರೌಡ್ಸ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ನ ಅಂತಿಮ ಪಟ್ಟಿ ಬಿಡುಗಡೆ – 5 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ