ಬೆಂಗಳೂರು: ಮಕ್ಕಳನ್ನು ನೋಡದೆ ಇಲ್ಲಿಂದ ಹೋಗಲ್ಲ ಎಂದು ಪತ್ನಿಯ ಮನೆಯ ಮುಂದೆ ಆಹೋರಾತ್ರಿ ಧರಣಿ ಕೂತಿದ್ದ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಕೊನೆಗೂ ಆಹೋರಾತ್ರಿ ಧರಣಿಯನ್ನು ಕೈಬಿಟ್ಟಿದ್ದಾರೆ.
ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಮನವೊಲಿಸುವಲ್ಲಿ ಡಿಸಿಪಿ ಭೀಮಶಂಕರ್ ಗೂಳೇದ್ ಪತ್ನಿ ಯಶಸ್ವಿಯಾಗಿದ್ದಾರೆ. ಕಲಬುರಗಿ ಐಎಸ್ಡಿಯಲ್ಲಿ ಎಸ್ಪಿಯಾಗಿರುವ ಅರುಣ್ ರಂಗರಾಜನ್ ಭಾನುವಾರ ಸಂಜೆ ಬೆಂಗಳೂರಿನ ವಸಂತನಗರದ ತನ್ನ ಪತ್ನಿಯ ಮನೆ ಬಳಿ ಬಂದಿದ್ದರು. ಬೆಂಗಳೂರಿನ ವಿವಿಐಪಿ ಸೆಕ್ಯೂರಿಟಿ ಡಿಸಿಪಿಯಾಗಿರುವ ಪತ್ನಿ ಇಲಕಿಯಾ ಕರುಣಾಕರನ್ ಅವರು ಮಕ್ಕಳನ್ನು ನೋಡಲು ಅವಕಾಶ ನೀಡಿರಲಿಲ್ಲ. ಇದರಿಂದ ಬೇಸತ್ತ ಎಸ್ಪಿ ಅರುಣ್ ರಂಗರಾಜನ್ ಅವರು ಮಕ್ಕಳನ್ನು ನೋಡದೆ ಇಲ್ಲಿಂದ ಹೋಗಲ್ಲ ಎಂದು ವಸಂತನಗರದ ಪತ್ನಿಯ ಮನೆ ಮುಂದೆಯೇ ಆಹೋರಾತ್ರಿ ಧರಣಿ ನಡೆಸಿದರು.
ಬೆಂಗಳೂರಿನ ನಾರ್ಥ್ ಈಸ್ಟ್ ಡಿಸಿಪಿ ಭೀಮಶಂಕರ್ ಗುಳೇದ್ ಹಾಗೂ ಇತರೆ ಅಧಿಕಾರಿಗಳು ಸೇರಿದಂತೆ ಸಾಕಷ್ಟು ಜನ ಐಪಿಎಸ್ ಅಧಿಕಾರಿಗಳು, ರಂಗರಾಜನರ್ ಮನವೊಲಿಸಲು ವಿಫಲರಾಗಿದ್ದರು. ಡಿಸಿಪಿ ಭೀಮಶಂಕರ್ ಗುಳೇದ್ ತಡರಾತ್ರಿ ಹನ್ನೇರಡು ಗಂಟೆವರೆಗೂ ಮನವೊಲಿಸಲು ಯತ್ನಿಸಿ ವಿಫಲರಾಗಿ ವಾಪಸ್ ಹೋದರು. ಆದರೆ ತಡರಾತ್ರಿ 2 ಗಂಟೆಯಾದರೂ ಎಸ್ಪಿ ರಂಗರಾಜನ್ ಅವರು ಪತ್ನಿಯ ಮನೆ ಮುಂದೆಯೇ ಕೊರೆವ ಚಳಿಯಲ್ಲೂ ಅನ್ನ, ನೀರು ಮುಟ್ಟದೇ ಏಕಾಂಗಿಯಾಗಿ ಧರಣಿ ಮುಂದುವರಿಸಿದರು. ಕೊನೆಗೆ ತಡರಾತ್ರಿ 2:30ರ ವೇಳೆಗೆ ಪತ್ನಿ ಜೊತೆಗೆ ಬಂದ ಡಿಸಿಪಿ ಭೀಮಾಶಂಕರ್ ಗುಳೇದ್, ಸೋಮವಾರ ನಿನ್ನ ಮಕ್ಕಳನ್ನು ಭೇಟಿ ಮಾಡಿಸುವ ಜವಾಬ್ದಾರಿ ನಮ್ಮದು ಎಂದು ಭರವಸೆ ನೀಡಿ, ಎಸ್ಪಿ ರಂಗರಾಜನ್ರನ್ನ ತನ್ನ ಮನೆಗೆ ಕರೆದುಕೊಂಡು ಹೋದರು.
ಇಲಕಿಯಾ ಹಾಗೂ ಅರುಣ್ ರಂಗರಾಜನ್ ಅವರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇಬ್ಬರ ನಡುವೆ ಸಾಮರಸ್ಯ ಇರಲಿಲ್ಲ. ಹೀಗಾಗಿ ಕೋರ್ಟ್ ಮೆಟ್ಟಿಲೇರಿ ಡೈವೋರ್ಸ್ ಪಡೆದುಕೊಂಡಿದ್ದರು. ಡೈವೋರ್ಸ್ ಆಗಿದ್ದರಿಂದ ಇಬ್ಬರೂ ದೂರವೇ ಉಳಿದಿದ್ದರು. ಈ ನಡುವೆ ಇಬ್ಬರು ಒಂದಾಗಿ ಮಗುವನ್ನು ಮಾಡಿಕೊಂಡಿದ್ದರು. ಈಗ ಮಗುವನ್ನು ಪತ್ನಿ ನೋಡುವುದಕ್ಕೆ ಬಿಡುತ್ತಿಲ್ಲ ಎಂದು ಅರುಣ್ ರಂಗರಾಜನ್ ದೂರಿದ್ದರು.
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅರುಣ್ ರಂಗರಾಜನ್, ನಾನು ಹಾಗೂ ಇಲಕಿಯಾ ಪ್ರೀತಿಸಿ ಮದುವೆ ಆಗಿದ್ದೇವು. ಆಗ ನಾವು ಚತ್ತೀಸ್ಗಢದಲ್ಲಿ ಕೆಲಸ ಮಾಡುತ್ತಿದ್ದೇವು. ಆದರೆ ಅಲ್ಲಿ ಸೇವೆ ಸಲ್ಲಿಸಲು ಒಪ್ಪದ ಇಲಕಿಯಾ, ಚತ್ತೀಸ್ಗಢ ಹೆಣ್ಣು ಮಕ್ಕಳಿಗೆ ಸೂಕ್ತ ಪ್ರದೇಶವಲ್ಲ. ಹೀಗಾಗಿ ನಾವು ಕರ್ನಾಟಕ್ಕೆ ವರ್ಗಾವಣೆ ತೆಗೆದುಕೊಳ್ಳೋಣ ಎಂದು ಒತ್ತಾಯಿಸಿದ್ದರು. ಆದರೆ ನನಗೆ ಇಷ್ಟವಿರಲಿಲ್ಲ. ಇದಕ್ಕೆ ಒಪ್ಪದ ಇಲಕಿಯಾ ನನ್ನ ಹೆಸರಿನಲ್ಲಿ ಪತ್ರ ಬರೆದು ಅದಕ್ಕೆ ತಾನೇ ಸಹಿ ಮಾಡಿ ಚತ್ತೀಸ್ಗಢ ಸರ್ಕಾರಕ್ಕೆ ಕಳುಹಿಸಿದ್ದಳು. ಆದರೆ ಸರ್ಕಾರವು ವರ್ಗಾವಣೆ ಸಾಧ್ಯವಿಲ್ಲ ಅಂತಾ ತಿಳಿಸಿದ್ದರು ಎಂದು ಹೇಳಿದ್ದರು.
ವರ್ಗಾವಣೆ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿತ್ತು. ಆದರೆ ಪತ್ನಿ ಸಂಬಂಧಿಕರು ಹಾಗೂ ಸ್ನೇಹಿತರಿಂದ ನನ್ನನ್ನು ಒಪ್ಪಿಸಿದ್ದಳು. ಅಷ್ಟೇ ಅಲ್ಲದೆ ಹಿರಿಯ ಅಧಿಕಾರಿಗಳ ಸಂಪರ್ಕಿಸಿ ಇಬ್ಬರಿಗೂ ವರ್ಗಾವಣೆಯಾಗುವಂತೆ ಮಾಡಿದ್ದಳು. ಕರ್ನಾಟಕ್ಕೆ ಬಂದ ಬಳಿಕ ಇಬ್ಬರಿಗೂ ಡಿವೋರ್ಸ್ ಆಗಿತ್ತು ಎಂದು ಅರುಣ್ ರಂಗರಾಜನ್ ತಿಳಿಸಿದ್ದರು.
ನಮ್ಮಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ದೂರವಾಗಿದ್ದಾಗ ನನ್ನ ಒಪ್ಪಿಗೆ ಇಲ್ಲದೆ ಪತ್ನಿ ಅಬಾರ್ಶನ್ ಮಾಡಿಸಿಕೊಂಡಿದ್ದಳು. ಅದಾದ ಬಳಿಕ ಇಬ್ಬರು ಸೇರಿ ಮಗುವನ್ನು ಮಾಡಿಕೊಂಡಿದ್ದೇವು. ಈಗ ನೋಡಿದರೆ ಮಕ್ಕಳನ್ನು ನೋಡಲು ಬಿಡುತ್ತಿಲ್ಲ ಎಂದು ಅರುಣ್ ಗಂಭೀರ ಆರೋಪ ಮಾಡಿದ್ದರು.