ಚೆನ್ನೈ: ತಮಿಳುನಾಡಿನ (Tamil Nadu) ರಾಜಕೀಯದಲ್ಲಿ ಈಗ ಕ್ಷಿಪ್ರಕ್ರಾಂತಿ ನಡೆಯುತ್ತಿದೆ. 1972 ರಲ್ಲಿ ಜನಪ್ರಿಯ ನಟ ದಿ. ಎಂ.ಜಿ ರಾಮಚಂದ್ರನ್ ಅವರಿಂದ ಸ್ಥಾಪಿತವಾದ ಎಐಎಡಿಎಂಕೆ (AIADMK) ಈಗ ಒಡೆದು ಹೋಳಾಗುತ್ತಾ ಅನ್ನೋ ಅನುಮಾನ ಮೂಡಿದೆ.
ಚೊಚ್ಚಲ ಚುನಾವಣೆಯಲ್ಲೇ ಸುನಾಮಿ ಎಬ್ಬಿರಿಸುವ ದಳಪತಿ ವಿಜಯ್ (Thalapathy vijay) ಅವರನ್ನ ಬೆಂಬಲಿಸಲು ಈಗ ಹಲವು ಪಕ್ಷಗಳು ಮುಂದಾಗುತ್ತಿವೆ. ಈ ಮಧ್ಯೆ ಟಿವಿಕೆ ಬೆಂಬಲಿಸುವ ವಿಚಾರದಲ್ಲಿ ಎಐಎಡಿಎಂಕೆ ಪಕ್ಷದ ಶಾಸಕರ ನಡುವೆ ಭಿನ್ನಮತ ಮೂಡಿದ್ದು 30 ಕ್ಕೂ ಹೆಚ್ಚು ಶಾಸಕರು ಪಕ್ಷ ತೊರೆಯುವ ಎಚ್ಚರಿಕೆ ನೀಡಿದ್ದಾರೆ.

ಹೌದು. ಅಣ್ಣಾ ಡಿಎಂಕೆ ಪಕ್ಷದ 47 ಶಾಸಕರಲ್ಲಿ 30 ಕ್ಕೂ ಹೆಚ್ಚಿನ ಶಾಸಕರು ಹೊಸ ಸರ್ಕಾರ ರಚನೆಗೆ ಟಿವಿಕೆ ಬೆಂಬಲಿಸುವಂತೆ ವರಿಷ್ಟರಿಗೆ ಒತ್ತಾಯಿಸಿದ್ದಾರೆ. ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳದಿದ್ದರೆ, 30 ಕ್ಕೂ ಹೆಚ್ಚು ಶಾಸಕರು ಪಕ್ಷ ತೊರೆದು ಸ್ವತಂತ್ರವಾಗಿ ಟಿವಿಕೆ ಬೆಂಬಲಿಸುವುದಾಗಿ ಎಡಪ್ಪಾಡಿ ಕೆ ಪಳನಿಸ್ವಾಮಿಗೆ ಎಚ್ಚರಿಕೆ ನೀಡಿದ್ದಾರೆ.
ಇದರಿಂದಾಗಿ ಇಂದು ನಡೆಯಬೇಕಿದ್ದ, ಎಐಎಡಿಎಂಕೆಯ ಪ್ರಮುಖ ಶಾಸಕರ ಸಭೆಯನ್ನು ಸಹ ಮುಂದೂಡಲಾಗಿದೆ. ಮತ್ತೊಂದು ಕಡೆ ಪಕ್ಷದ ಹಿರಿಯ ನಾಯಕ ಸಿವಿ ಷಣ್ಮುಗಂ ಅತೃಪ್ತ ಶಾಸಕರ ನೇತೃತ್ವ ವಹಿಸುತ್ತಿದ್ದು, ಅವರ ನಿವಾಸದಲ್ಲಿ ಪ್ರಮುಖ ಸಭೆ ನಡೆಯುವ ಸಾಧ್ಯತೆಯಿದೆ.
