ಹುಬ್ಬಳ್ಳಿ: ಇಂಡಿಗೋ ವಿಮಾನಯಾನ ಸೇವೆಯಲ್ಲಿ ಮತ್ತೆ ವ್ಯತಯ ಉಂಟಾಗಿದ್ದು, ಒಂದೂವರೆ ಗಂಟೆ ತಡವಾಗಿ ಹುಬ್ಬಳ್ಳಿಗೆ ಆಗಮಿಸಿದೆ. ಇದರಿಂದಾಗಿ ವಿಮಾನದಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಸಹ ತಡವಾಗಿದ್ದು, ಒಂದೂವರೆ ಗಂಟೆ ವಿಮಾನದಲ್ಲೇ ಕಾಲ ಕಳೆದಿದ್ದಾರೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಬೇಕಾದ ಇಂಡಿಗೋ ವಿಮಾನ ಇಂದು ಮತ್ತೆ ಒಂದೂವರೆ ಗಂಟೆ ತಡವಾಗಿ ಆಗಮಿಸಿದ ಪರಿಣಾಮ ಪ್ರಯಾಣಿಕರು ಪರದಾಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಒಂದೂವರೆ ಗಂಟೆ ಅಗಸದಲ್ಲೇ ಸುತ್ತಿದ ವಿಮಾನ
ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಬೇಕಾದ 6ಇ-661 ಇಂಡಿಗೋ ವಿಮಾನ ಇಂದು ಬೆಳಗ್ಗೆ 8-15ಕ್ಕೆ ಬೆಂಗಳೂರಿನಿಂದ ಟೇಕ್ ಆಫ್ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ವಿಮಾನ 9-15ಕ್ಕೆ ಟೇಕ್ ಆಫ್ ಆಗಿದೆ. ಹೀಗಾಗಿ ಪ್ರತಿದಿನದಂತೆ 9-15ಕ್ಕೆ ಹುಬ್ಬಳ್ಳಿಗೆ ಆಗಮಿಸಬೇಕಿದ್ದ ವಿಮಾನ ಇಂದು ಸುಮಾರು ಒಂದೂವರೆ ಗಂಟೆ ತಡವಾಗಿ ಆಗಮಿಸಿದ್ದು, ಬೆಳಗ್ಗೆ 10-39ಕ್ಕೆ ಹುಬ್ಬಳ್ಳಿ ತಲುಪಿದೆ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ವಿಮಾನ ಟೇಕ್ ಆಫ್ ಆಗದ ಪರಿಣಾಮ ವಿಮಾನದಲ್ಲಿ ಕೂತು ಸುಸ್ತಾಗಿ ಕೊನೆಗೆ ವಿಮಾನ ಯಾಕೆ ಟೇಕ್ ಆಗಿಲ್ಲವೆಂದು ಪ್ರಶ್ನೆ ಮಾಡಿದ ಪ್ರಸಂಗವೂ ನಡೆಯಿತು.
ಮೊದಲು ಹವಾಮಾನ ವೈಪರೀತ್ಯವಾಗಿದೆ 30 ನಿಮಿಷ ತಡವಾಗಿ ಟೇಕ್ಆಫ್ ಆಗಲಿದೆ ಎಂದು ಸಿಬ್ಬಂದಿ ತಿಳಿಸಿದ್ದರು. ಆದರೆ ಒಂದು ಗಂಟೆ ನಂತರ ಟೇಕ್ ಅಫ್ ಆಗಿದೆ. ಬೆಳಗ್ಗೆ 9.15ಕ್ಕೆ ಹುಬ್ಬಳ್ಳಿಗೆ ಆಗಮಿಸಬೇಕಿದ್ದ ವಿಮಾನ 10-39ಕ್ಕೆ ಆಗಮಿಸಿದೆ. ಹೀಗಾಗಿ ಸಿದ್ದರಾಮಯ್ಯ ವಿಮಾನದಲ್ಲಿ ಕಾದು ಸುಸ್ತಾಗಿದ್ದಾರೆ. ಅಲ್ಲದೆ ಸಿದ್ದರಾಮಯ್ಯನವರಿಗಾಗಿ ಕಾಯುತ್ತಿದ್ದ ಬೆಂಗಾವಲು ಪಡೆಯ ಸಿಬ್ಬಂದಿ ಹಾಗೂ ಕಾಂಗ್ರೆಸ್ ನಾಯಕರು ಸಹ ಹುಬ್ಬಳ್ಳಿ ವಿಮಾನ ನಿಲ್ದಾಣದೊಳಗಡೆ ಕೂತು ಸುಸ್ತಾಗಿದ್ದಾರೆ.
ಕಳೆದ ವಾರವೂ ಸಹ ಇದೇ ಇಂಡಿಗೋ ವಿಮಾನ ಮುಂಬೈಯಿಂದ ಹುಬ್ಬಳ್ಳಿಗೆ ಆಗಮಿಸುವ ವೇಳೆ ಹವಾಮಾನ ವೈಪರಿತ್ಯದಿಂದಾಗಿ ಸುಮಾರು ಒಂದೂವರೆ ಗಂಟೆ ಆಕಾಶದಲ್ಲೇ ಸುತ್ತಿ ಕೊನೆಗೆ ಲ್ಯಾಂಡ್ ಆಗಿತ್ತು. ಇಂದು ಮತ್ತೆ ವಿಮಾನಯಾನ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.