ವಿಜಯಪುರ: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡು ನೀಡಿದ್ದ ರಾಜೀನಾಮೆಯನ್ನು ಇಂಡಿ (Indi) ಶಾಸಕ ಯಶವಂತರಾಯ ಗೌಡ ಪಾಟೀಲ್ (Yashavantarayagouda Patil) ಅವರು ಇದೀಗ ಹಿಂಪಡೆದಿದ್ದಾರೆ.
ಡಿಕೆಶಿ ಸಂಪುಟದ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಬೇಸರಗೊಂಡಿದ್ದ ಯಶವಂತರಾಯ ಗೌಡ ಪಾಟೀಲ್ ಅವರು ರಾಜೀನಾಮೆ ನೀಡಿದ್ದರು. ಇದೀಗ ಕಾಂಗ್ರೆಸ್ನ ಹಿರಿಯ ಸಚಿವರು, ಶಾಸಕರು ಒತ್ತಡ ಹಾಕಿದ ಹಿನ್ನೆಲೆ ರಾಜೀನಾಮೆ ಪತ್ರ ವಾಪಸ್ ಪಡೆಯುವ ಬಗ್ಗೆ ವಿಧಾನಸಭೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ರಾಘವೇಂದ್ರ ಹಿಟ್ನಾಳ್ಗೆ ಕೈತಪ್ಪಿದ ಮಂತ್ರಿಗಿರಿ – ಕೊಪ್ಪಳ ಕಾಂಗ್ರೆಸ್ ಅಧ್ಯಕ್ಷೆ ರಾಜೀನಾಮೆ
ರಾಜೀನಾಮೆ ಸಲ್ಲಿಸಿದ ಬಳಿಕ ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿದ್ದ ಅವರು, ಕಾಂಗ್ರೆಸ್ನಲ್ಲಿ ನಿಷ್ಠೆ, ಪ್ರಾಮಾಣಿಕತೆಗೆ ಬೆಲೆಯಿಲ್ಲ. 2023ರ ಪೂರ್ವದಲ್ಲೇ ನನಗೆ ಕರೆದು ಭರವಸೆ ಕೊಟ್ಟಿದ್ದರು. ಈಗ ನಾನು ಬಿಟ್ಟು ಹೋಗ್ತಿಲ್ಲ, ಅವರೇ ನನ್ನನ್ನು ಬಿಟ್ಟಿದ್ದಾರೆ ಎಂದು ಬೇಸರ ಹೊರಹಾಕಿದ್ದರು.
ಕಳೆದ ಬಾರಿಯೇ ನಿಗಮ ಮಂಡಳಿ ಕೊಡ್ತೀವಿ ಅಂದಿದ್ದರು. ಆದರೆ ನಾನು ಬೇಡ ಅಂದಿದ್ದೆ. ಸ್ವಾತಂತ್ರ್ಯದ ನಂತರ ಇದುವರೆಗೂ ಇಂಡಿ ಕ್ಷೇತ್ರದವರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ನಾನು ರಾಜೀನಾಮೆ ಕೊಟ್ಟಿದ್ದೀನಿ, ಅದನ್ನ ಅಂಗೀಕಾರ ಮಾಡಬೇಕು. ಯಾವುದೇ ಕಾರಣಕ್ಕೂ ನಾನು ವಾಪಸ್ ಪಡೆಯಲ್ಲ. ಯಾವುದೇ ಕಾರಣಕ್ಕೂ ನಾನು ಶಾಸಕನಾಗಿ ಮುಂದುವರೆಯಲ್ಲ. ಜಿಲ್ಲೆಯ ರಾಜಕಾರಣ ಬೀದಿಗೆ ಬಂದಿದೆ ಎಂದು ಕಿಡಿಕಾರಿದ್ದರು.



