ಚಾಮರಾಜನಗರ: ಸರ್ಕಾರಿ ಶಾಲೆಗಳ ಪಠ್ಯಪುಸ್ತಗಳನ್ನು ಅಕ್ರಮವಾಗಿ ಮಾರಾಟ ಮಾಡುವ ದಂಧೆ ಶಿಕ್ಷಣ ಸಚಿವ ಎನ್.ಮಹೇಶ್ ರವರ ತವರು ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹನೂರು ಶಿಕ್ಷಣ ವಲಯ ಕಚೇರಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ.
ರಾಜ್ಯದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪಠ್ಯ ಪುಸ್ತಕಗಳ ಅಭಾವ ಉಂಟಾಗಿದೆ. ಆದರೆ ಕೊಳ್ಳೇಗಾಲ ತಾಲೂಕಿನ ಹನೂರು ಶಿಕ್ಷಣ ವಲಯ ಕಚೇರಿಯಲ್ಲಿ ಹಣದ ಆಸೆಗೆ ಶಿಕ್ಷಣ ಸಂಯೋಜಕ ಮಹದೇವಶೆಟ್ಟಿ ಅಕ್ರಮವಾಗಿ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಹನೂರು ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ವಿತರಣೆ ಮಾಡಲು ಗೋದಾಮಿನಲ್ಲಿ ಸಂಗ್ರಹಿಸಿರುವ ಪಠ್ಯ ಪುಸ್ತಗಳನ್ನು ಖಾಸಗಿ ಶಾಲೆ ಹಾಗೂ ಅರೆ ಸರ್ಕಾರಿ ಶಾಲೆಗಳ ಪೋಷಕರಿಗೆ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಇದಕ್ಕೂ ಮುಂದೆ ಹೋಗಿರುವ ಅಧಿಕಾರಿಗಳು ಪುಸ್ತಕಗಳನ್ನು ಖಾಸಗಿ ಪುಸ್ತಕ ಮಳಿಗೆಗಳಿಗೂ ಸಹ ಕಡಿಮೆ ಬೆಲೆಯಲ್ಲಿ ಮಾರಾಟಮಾಡುತ್ತಿದ್ದಾರೆ.
ಒಂದು ಕಡೆ ಸರ್ಕಾರಿ ಶಾಲೆಯ ಮಕ್ಕಳು ನಮಗೆ ಇನ್ನೂ ಪುಸ್ತಕಗಳೇ ಬಂದಿಲ್ಲ ಎನ್ನುತ್ತಿದ್ದರೆ, ಇನ್ನೊಂದೆಡೆ ಅಕ್ರಮವಾಗಿ ಪಠ್ಯ ಪುಸ್ತಕಗಳು ಮಾರಾಟವಾಗುತ್ತಿವೆ. ಕೂಡಲೇ ಶಿಕ್ಷಣ ಇಲಾಖೆ ಎಚ್ಚೆತ್ತು, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಗೊಳ್ಳಬೇಕಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv