ಚಿಕ್ಕಬಳ್ಳಾಪುರ: ನಾನು ಶಾಸಕನಾದರೆ ಎಣ್ಣೆ, ಮಟನ್, ಕಾಫಿ, ಟೀ ಮತ್ತು ಊಟ ಎಲ್ಲವೂ ಉಚಿತ ಎಂದು ಅಭ್ಯರ್ಥಿಯೊಬ್ಬರು ಸ್ಪೆಷಲ್ ಚುನಾವಣಾ ಪ್ರಣಾಳಿಕೆ ಮುದ್ರಣ ಮಾಡಿದ್ದು, ಪ್ರಣಾಳಿಕೆಯ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಯನಮಲಪಾಡಿಯ ನಿವಾಸಿ, ವೈ. ಎನ್ ಸುರೇಶ್ ಇಂತಹ ಫ್ರೀ ಆಫರ್ ಪ್ರಣಾಳಿಕೆಯ ಭಿತ್ತಿಪತ್ರ ಮುದ್ರಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿರುವ ವೈ. ಎನ್ ಸುರೇಶ್ ಈ ರೀತಿಯ ಭಿನ್ನ ವಿಭಿನ್ನ ಚುನಾವಣಾ ಪ್ರಣಾಳಿಕೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಜನರ ಗಮನ ಸೆಳೆಯುತ್ತಿದ್ದಾರೆ.
ವೈ ಎನ್ ಸುರೇಶ್ ನಾನು ಯಾಕೆ ಎಂಎಲ್ಎ ಆಗಬಾರದು ಎಂದು ಹೆಡ್ಲೈನ್ ಹಾಕಿ ಚುನಾವಣಾ ಪ್ರಣಾಳಿಕೆಯನ್ನು ತಯಾರಿಸಿದ್ದಾರೆ.
ತಾನು ಗೆದ್ದರೆ, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮದ್ಯ ಫ್ರೀ, ಮಹಿಳೆಯರಿಗೆ ದನಿಯಾ, ಖಾರದಪುಡಿ, ಉಪ್ಪಿನಕಾಯಿ ಫ್ರೀ. ಇನ್ನೂ ಕ್ಷೇತ್ರವನ್ನೇ ಹಸಿವು ಮುಕ್ತ ಮಾಡೋಕೆ ಅಂತ ದಿನಾ ಕ್ಷೇತ್ರದ ಎಲ್ಲಾ ಜನತೆಗೆ 3 ಬಾರಿ ಊಟ, 2 ಬಾರಿ ಕಾಫಿ ಟೀ ಜೊತೆಗೆ ವಾರಕ್ಕೆ ಎರಡು ಬಾರಿ ಮಟನ್ ಚಿಕನ್ ಫ್ರೀ ಎಂದು ಪ್ರಣಾಳಿಕೆಯಲ್ಲಿ ಹಾಕಿಸಿದ್ದಾರೆ.
ಅಷ್ಟೇ ಅಲ್ಲದೇ ಇದೆಲ್ಲದರ ಜೊತೆಗೆ ಹಬ್ಬ ಬಂದರೆ ಹೊಸ ಬಟ್ಟೆ, ಬಸ್ ಗಳಲ್ಲಿ ಫ್ರೀ ಓಡಾಟ, ಆರೋಗ್ಯ, ಶಿಕ್ಷಣ ಎಲ್ಲಾ ಉಚಿತ. ಮದುವೆ ಮಾಡಿಕೊಳ್ಳುವರಿಗೆ ಮಾಂಗಲ್ಯ, ಬಟ್ಟೆ, ಎಲ್ಲದಕ್ಕಿಂತ ವಿಶೇಷವಾಗಿ ಮೊಬೈಲ್ ಡೇಟಾ ಹಾಗೂ ಕರೆ ಕೂಡ ಫ್ರೀ ಎಂದು ಹಾಕಿಸಿದ್ದಾರೆ. ಇಂತಹ ಅಫರ್ ಮೇಲಿನ ಅಫರ್ ಗಳ ಪ್ರಣಾಳಿಕೆ ಅಣಿಗೊಳಿಸಿರುವ ವೈ ಎನ್ ಸುರೇಶ್ ಪ್ರಣಾಳಿಕೆ ಪತ್ರ ಈಗ ಸಾಮಾಜಿಕ ಜಾಲತಾಣಗಳ್ಲಿ ಸಖತ್ ವೈರಲ್ ಆಗಿದೆ.