ಬೆಂಗಳೂರು: 24 ಗಂಟೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿ ಸರ್ಕಾರ ಬೀಳದೇ ಇದ್ದರೇ, ಬಿಜೆಪಿ ಶಾಸಕ ಉಮೇಶ್ ಕತ್ತಿ ರಾಜೀನಾಮೆ ಕೊಟ್ಟು ಬರಲಿ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸವಾಲು ಎಸೆದಿದ್ದಾರೆ.
ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಸರ್ಕಾರ ಉರುಳಿಸುವ ಬಗ್ಗೆ ಉಮೇಶ್ ಕತ್ತಿ ಬಳಿ ಏನು ದಾಖಲೆ ಇದೆ. ಅವರಿಗೆ ನಿಜವಾಗಿಯೂ ತಾಕತ್ತಿದ್ದರೆ, ಸರ್ಕಾರವನ್ನು ಬೀಳಿಸಲಿ. 24 ಗಂಟೆ ಯಾಕೆ? ಈಗಲೇ ಬೀಳುತ್ತೆ ಎಂದು ಹೇಳಬಹುದಿತ್ತಲ್ಲವೇ? ಕತ್ತಿಯವರ ಮಾತು ನಿಜವಾಗದೇ ಇದ್ದರೆ ಅವರಿಗೆ ತಾಕತ್ತಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಅದನ್ನು ಬಿಟ್ಟು ಹೀಗೆ ಹುಚ್ಚು ಹುಚ್ಚಾಗಿ ಈ ರೀತಿ ಮಾತನಾಡಬಾರದು ಎಂದು ಕಿಡಿಕಾರಿದ್ದಾರೆ.
ದೋಸ್ತಿ ಸರ್ಕಾರ ಸಚಿವ ಸಂಪುಟ ವಿಸ್ತರಣೆಯ ಬಳಿಕ ಖಾತೆಗಳ ಹಂಚಿಕೆ ಬಗ್ಗೆ ಒಳ್ಳೆಯ ಮಾತುಕತೆ ಆಗಿದೆ. ಆದರೆ ಇವರಿಗೆ ಆ ಖಾತೆ, ಅವರಿಗೆ ಈ ಖಾತೆ ಎನ್ನುವುದು ಸುಳ್ಳು. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಪರಮೇಶ್ವರ್ ನಡುವೇ ಯಾವುದೇ ಮಾತಿನ ಚಕಮಕಿ ನಡೆದಿಲ್ಲ. ಅದೆಲ್ಲವೂ ಸತ್ಯಕ್ಕೆ ದೂರವಾಗಿದ್ದು ಎಂದು ಸ್ಪಷ್ಟಪಡಿಸಿದ್ದಾರೆ.
ಉಮೇಶ್ ಕತ್ತಿ ಹೇಳಿದ್ದೇನು?
ಕಾಂಗ್ರೆಸ್ಸಿನ 15 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಯಾವುದೇ ಶಾಸಕರ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ. ಇನ್ನು 24 ಗಂಟೆಗಳಲ್ಲಿ ದೋಸ್ತಿ ಸರ್ಕಾರ ಪತನವಾಗಲಿದೆ. ಅಲ್ಲದೇ ಮುಂಬರುವ ಒಂದು ವಾರದಲ್ಲೇ ಬಿಜೆಪಿ ರಾಜ್ಯದಲ್ಲಿ ಹೊಸ ಸರ್ಕಾರ ರಚಿಸುತ್ತದೆ ಎಂದು ಹೇಳಿದ್ದರು. ಇದನ್ನೂ ಓದಿ : 24 ಗಂಟೆಯಲ್ಲಿ ದೋಸ್ತಿ ಸರ್ಕಾರ ಪತನ – ಉಮೇಶ್ ಕತ್ತಿ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv