ಹಾಸನ: ವರ್ಗಾವಣೆ ವಿಚಾರಗಳಲ್ಲಿ ಅವ್ಯವಹಾರ ಆಗಿದ್ದರೆ ಖುದ್ದು ಪರಿಶೀಲಿಸಲಿ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಯಡಿಯೂರಪ್ಪನವರಿಗೆ ತಿರುಗೇಟು ನೀಡಿದ್ದಾರೆ.
ಬಿಎಸ್ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವರ್ಗಾವಣೆ ವಿಚಾರದಲ್ಲಿ ಅವ್ಯವಹಾರವಾಗಿದ್ದರೆ ಖುದ್ದು ಪರಿಶೀಲನೆ ನಡೆಸಲಿ, ಯಡಿಯೂರಪ್ಪನವರಿಗೆ ಬೇಕಾದರೆ ದಾಖಲೆಗಳನ್ನು ತೋರಿಸಲು ಸಿದ್ಧ. ನಾನು ಯಾವ ಇಲಾಖೆಗಳ ವರ್ಗಾವಣೆಯ ವಿಷಯದಲ್ಲಿ ಕೈ ಹಾಕಿಲ್ಲ. ನನ್ನ ಇಲಾಖೆ ಹೊರತುಪಡಿಸಿ ಬೇರೆ ಇಲಾಖೆಗಳ ವಿಚಾರಕ್ಕೆ ಕೈ ಹಾಕಿಲ್ಲವೆಂದು ತಿರುಗೇಟು ನೀಡಿದ್ದಾರೆ.
ನನ್ನ ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗಾಗಿ ನಾನು ಕಳೆದ 6 ತಿಂಗಳಿನಿಂದಲೂ ಪ್ರಯತ್ನಿಸುತ್ತಿದ್ದೇನೆ. ನನಗೆ ಬೇರೆ ಇಲಾಖೆಯಿಂದ ಯಾವುದೇ ಕೆಲಸವನ್ನು ಮಾಡಿಸಿಕೊಳ್ಳಲು ಅಗತ್ಯವಿಲ್ಲ. ಈ ಕುರಿತು ಉಪಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಲಿ ಎಂದ ಅವರು ಇದೇ ವೇಳೆ, ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣೆಯ ವಿಚಾರದಲ್ಲಿ ದೇವೇಗೌಡರ ತೀರ್ಮಾನವೇ ಅಂತಿಮ ಅಂದ್ರು.
ಬಿಎಸ್ವೈ ಹೇಳಿದ್ದೇನು?
ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣನವರು, ತಮ್ಮ ಇಲಾಖೆಯಲ್ಲದೇ ಇತರೆ ಇಲಾಖೆಗಳಲ್ಲೂ ಅಧಿಕಾರ ಚಲಾಯಿಸುತ್ತಿದ್ದಾರೆ. ವರ್ಗಾವಣೆಯಲ್ಲಿ ಅಪಾರ ಪ್ರಮಾಣದ ಅವ್ಯವಹಾರ ನಡೆದಿದೆ. ಅಲ್ಲದೇ ವರ್ಗಾವಣೆಗೆ ಸಹ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews