ಮುಂಬೈ: ವಿಶ್ವಕಪ್ ಕ್ರಿಕೆಟ್ (World Cup Cricket) ಪಂದ್ಯದಲ್ಲಿಂದು ಭಾರತ-ಶ್ರೀಲಂಕಾ (Ind vs SL) ಮುಖಾಮುಖಿಯಾಗುತ್ತಿದ್ದು, 12 ವರ್ಷಗಳ ಬಳಿಕ ಅದೇ ವಾಂಖೆಡೆ ಸ್ಟೇಡಿಯಂನಲ್ಲಿ ಸೆಣಸಲಿವೆ. 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ (Team India) ಇದೇ ಕ್ರೀಡಾಂಗಣದಲ್ಲಿ ಲಂಕಾ ತಂಡವನ್ನು ಮಣಿಸಿ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತ್ತು.
2023ರ ಟೂರ್ನಿಯಲ್ಲಿ ಈಗಾಗಲೇ 6 ಪಂದ್ಯಗಳನ್ನು ಗೆದ್ದಿರುವ ಭಾರತ ಸತತ 7ನೇ ಗೆಲುವಿನೊಂದಿಗೆ ಸೆಮೀಸ್ ಪ್ರವೇಶಿಸುವ ತವಕದಲ್ಲಿದೆ. ಆದ್ರೆ ಮಾಡು ಇಲ್ಲವೇ ಮಡಿ ಹಂತದಲ್ಲಿರುವ ಲಂಕಾ (Sri Lanka) ತಂಡ ಗೆದ್ದು ಸೆಮಿಫೈನಲ್ ರೇಸ್ನಲ್ಲಿ ಉಳಿಯುವ ಕನಸು ಕಂಡಿದೆ. ಇದನ್ನೂ ಓದಿ: ವಿಶ್ವಕಪ್ನಲ್ಲಿ ವಿಶೇಷ ಸಾಧನೆ ಮಾಡಿದ ಡಿ ಕಾಕ್ – ಸಚಿನ್ ವಿಶ್ವ ದಾಖಲೆ ಮುರಿಯಲು ಬೇಕಿದೆ 129 ರನ್
ಭಾರತದ್ದೇ ಮೇಲುಗೈ: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ 167 ಪಂದ್ಯಗಳು ನಡೆದಿದ್ದು, ಭಾರತ 98ರಲ್ಲಿ ಗೆಲುವು ಸಾಧಿಸಿದ್ದರೆ, ಲಂಕಾ 57ರಲ್ಲಿ ಗೆಲುವು ಸಾಧಿಸಿದೆ. ಇನ್ನೂ ಪ್ರಸಕ್ತ ವರ್ಷದಲ್ಲೇ ಲಂಕಾ ವಿರುದ್ಧ ಭಾರತ 5 ಪಂದ್ಯಗಳನ್ನಾಡಿದ್ದು, 4ರಲ್ಲಿ ಗೆಲುವು ಸಾಧಿಸಿದೆ. ಕಳೆದ 10 ಏಕದಿನ ಪಂದ್ಯಗಳಲ್ಲಿ ಇತ್ತಂಡಗಳ ಮುಖಾಮುಖಿ ನೋಡಿದರೇ ಶ್ರೀಲಂಕಾ ಕೇವಲ 1 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಉಳಿದ 9 ಪಂದ್ಯಗಳಲ್ಲಿ ಭಾರತವೇ ಜಯಭೇರಿ ಬಾರಿಸಿದೆ. ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ಆಫ್ರಿಕಾಗೆ 190 ರನ್ಗಳ ಭರ್ಜರಿ ಜಯ – ಸೆಮಿಗೆ ಹೋಗುತ್ತಾ ಪಾಕ್?
ಉತ್ತಮ ಫಾರ್ಮ್ನಲ್ಲಿರುವ ಟೀಂ ಇಂಡಿಯಾಕ್ಕೆ ಲಂಕಾ ವಿರುದ್ಧವೂ ಗೆಲ್ಲುವ ವಿಶ್ವಾಸ ಹೊಂದಿದೆ. ಆದ್ರೆ ಏಕದಿನ ಏಷ್ಯಾಕಪ್ ಟೂರ್ನಿಯಲ್ಲಿ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದ ಶುಭಮನ್ ಗಿಲ್ ಡೆಂಗ್ಯೂ ಜ್ವರಕ್ಕೆ ತುತ್ತಾದ ಬಳಿಕ ಫಾರ್ಮ್ಗೆ ಮರಳುವುದು ಕಷ್ಟವಾಗಿದೆ. ಬೇಗನೆ ವಿಕೆಟ್ ಒಪ್ಪಿಸುತ್ತಿರುವ ಗಿಲ್ ಈ ಟೂರ್ನಿಯಲ್ಲಿ 4 ಪಂದ್ಯಗಳಲ್ಲಿ ಕೇವಲ 104 ರನ್ ಗಳಿಸಿದ್ದಾರೆ. ಇನ್ನೂ ಒಂದೇ ಒಂದು ಅರ್ಧಶತಕ ಗಳಿಸಿರುವ ಮಧ್ಯಮ ಕ್ರಮಾಂಕದ ಶ್ರೇಯಸ್ ಅಯ್ಯರ್ ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದು, ಚೇತರಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಿದೆ.
ಪಾಂಡ್ಯ ಔಟ್: ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಮೊಣಕಾಲು ಗಾಯಕ್ಕೆ ತುತ್ತಾಗಿ ಸಮಸ್ಯೆಯಿಂದ ಬಳಲುತ್ತಿರುವ ಟೀಂ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ ಶ್ರೀಲಂಕಾ ವಿರುದ್ಧ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಿಂದಲೂ ಹೊರಗುಳಿಯುವ ಸಾಧ್ಯತೆಗಳಿವೆ ಎಂದು ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ. ಸದ್ಯ ಅವರಿಗೆ ಇನ್ನೂ ವಿಶ್ರಾಂತಿ ಬೇಕಿದೆ. ಸೆಮೀಸ್ ವೇಳೆಗೆ ಫಿಟ್ ಆಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
Web Stories