ಉಡುಪಿ: ಕಳೆದ ಎರಡು ತಿಂಗಳಿಂದ ನನಗೆ ಇಲ್ಲಿ ಊಟ ಮಾಡುವುದಕ್ಕೂ ಭಯವಾಗುತ್ತಿದೆ ಎಂದು ಶಿರೂರು ಹೇಳಿಕೊಂಡಿದ್ದರು ಅಂತ ಬಾರ್ಕೂರು ಮಠಾಧೀಶದ ಸಂಸ್ಥಾಪಕ ಸಂತೋಷ್ ಗುರೂಜಿ ಹೇಳಿದ್ದಾರೆ.
ಶಿರೂರು ಮಠದ ಸ್ವಾಮೀಜಿಗಳು ಇಂದು ಬೆಳಗ್ಗೆ ಕೆಎಂಸಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು, ಈ ಸಂಬಂಧ ಸಂತೋಷ್ ಗುರೂಜಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ರು. ಊಟ ಮಾಡುವುದಕ್ಕೂ ಭಯವಾಗುತ್ತಿದೆ ಅಂತ ಶ್ರೀಗಳ ಹೇಳಿಕೆಯಿಂದ ನನಗೆ ಆತಂಕವಾಗಿತ್ತು. ಆದ್ರೆ ನನ್ನ ವೈಯಕ್ತಿಕ ಕಾರಣದಿಂದ ಅವರು ಒಂದು ವಾರದಿಂದ ನನ್ನ ಜೊತೆ ಮಾತನಾಡಲಿಲ್ಲ ಅಂದ್ರು.
ಒಬ್ಬರೇ ಓಡಾಡಬೇಡಿ ಯಾರಾದರೂ ನಾಲ್ಕು ಜನರನ್ನು ನಿಮ್ಮ ಜೊತೆ ಇರಿಸಿಕೊಳ್ಳಿ ಎಂದು ನಾನು ಅವರಿಗೆ ಹೇಳಿದ್ದೆ. ಆಗ ಅವರು ನನ್ನ ಎದುರಿಗೆ ಬಂದು ಯಾರು ಏನು ಮಾಡಲು ಸಾಧ್ಯವಿಲ್ಲ. ಆದರೆ ನನ್ನ ಆಹಾರದಲ್ಲಿ ಅಥವಾ ನಾನು ಮಲಗಿರುವಾಗ ಏನಾದರೂ ಮಾಡಬಹುದು ಎಂಬ ಭಯವಿದೆ ಎಂದು ಹೇಳಿದ್ದರು ಅಂತ ಗೂರೂಜಿ ಹೇಳಿದ್ರು.
ನಾಲ್ಕು ತಿಂಗಳ ಹಿಂದೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ನಂತರ ಎರಡು ತಿಂಗಳಿಂದ ಅದಕ್ಕೆ ರಕ್ಕೆಪುಕ್ಕಗಳೆಲ್ಲವೂ ಸೇರಿಕೊಂಡಿತ್ತು. ಬಳಿಕ ಶಿರೂರು ನೀಡಿದ ಹೇಳಿಕೆಗಳು ಮಾಧ್ಯಮದಲ್ಲಿ ಬಂತು. ಇದರಿಂದ ಅವರು ತೀವ್ರ ವಿರೋಧವನ್ನು ಕಾಣಬೇಕಾಯಿತ್ತು. ಶಿರೂರು ಸ್ವಾಮಿಜಿ ಅವರು ಕಂಡಿದ್ದನ್ನ ಹಾಗೇ ಹೇಳುತ್ತಾರೆ. ಯಾವುದನ್ನು ವಿರೋಧಿಸಬೇಕೋ ಅದನ್ನು ವಿರೋಧಿಸುತ್ತಾರೆ. ಅವರು ಕಂಡಿದನ್ನು ಬಿಡುವುದಿಲ್ಲ. ಸಾಮಾಜಿಕ ಕಾಂತ್ರಿಯಲ್ಲೂ ಕೂಡ ಇವರು ವಿರೋಧವನ್ನು ಕಂಡಿದ್ದರು. ಅವರ ಮಠದಲ್ಲಿ ಎಲ್ಲ ಜಾತಿಯ ಜನರಿಗೆ ನೇರ ಪ್ರವೇಶವಿದೆ ಅಂದ್ರು.
ಶ್ರೀಗಳ ಜೊತೆ ನನ್ನ ಹತ್ತಿರದ ಒಡನಾಟವಿತ್ತು. ಶಿರೂರು ಮಠಕ್ಕೂ ಹಾಗೂ ನಮ್ಮ ಬಾರ್ಕೂರು ಮಠಕ್ಕೂ ಆತ್ಮೀಯ ಸಂಬಂಧವಿತ್ತು. ನನ್ನ ಪಟ್ಟಾಭಿಷೇಕದಿಂದ ಮೊನ್ನೆವರೆಗೂ ನಮ್ಮಿಬ್ಬರ ನಡುವೆ ಆತ್ಮೀಯ ಬಾಂಧವ್ಯವಿತ್ತು ಅಂತ ಹೇಳಿದ್ರು.