ನವದೆಹಲಿ: ಕೇಂದ್ರ ಸರ್ಕಾರಕ್ಕೆ (Union Government) ಫೋನ್ ಕದ್ದಾಲಿಕೆ ಮಾಡುವ ಅವಶ್ಯಕತೆಯಿಲ್ಲ. ಬಹುಶಃ ವಿರೋಧ ಪಕ್ಷಗಳ ನಾಯಕರನ್ನು ಯಾರಾದರೂ ಪ್ರಾಂಕ್ ಮಾಡಿರಬಹುದು ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ (Piyush Goyal) ಅವರು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಕೆಲ ಪ್ರತಿಪಕ್ಷ ನಾಯಕರಿಗೆ ಆಪಲ್ನಿಂದ (Apple) ಸರ್ಕಾರಿ ಪ್ರಾಯೋಜಕತ್ವದ ದಾಳಿ ನಡೆಯುತ್ತಿದೆ ಎಂಬ ಆರೋಪವನ್ನ ತಳ್ಳಿಹಾಕಿದ್ದಾರೆ. ಬಹುಶಃ ವಿರೋಧ ಪಕ್ಷಗಳ ನಾಯಕರನ್ನು ಯಾರಾದರೂ ಪ್ರಾಂಕ್ ಮಾಡಿರಬಹುದು, ಅವರು ಅಧಿಕೃತವಾಗಿ ದೂರು ನೀಡಿದ್ರೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಹ್ಯಾಕರ್ಸ್ ಸಕ್ರೀಯವಾಗಿದ್ದಾರೆ: ಪ್ರತಿಪಕ್ಷಗಳು ದುರ್ಬಲ ಸ್ಥಿತಿಯನ್ನು ಎದುರಿಸುತ್ತಿವೆ, ಎಲ್ಲದರಲ್ಲೂ ಪಿತೂರಿಯನ್ನ ಹುಡುಕುತ್ತಿದ್ದಾರೆ. ಆಪಲ್ ಕಂಪನಿ ಸ್ವತಃ ಸ್ಪಷ್ಟಪಡಿಸಿದೆ. ಸುಮಾರು 150 ದೇಶಗಳ ವ್ಯಕ್ತಿಗಳಿಗೆ ನೋಟಿಫಿಕೇಶನ್ ಹೋಗಿದೆ. ಉಗಾಂಡದ ರಾಜಕೀಯ ನಾಯಕರ ಐಫೋನಿಗೆ ಈ ರೀತಿಯ ಎಚ್ಚರಿಕೆ ಸಂದೇಶ ಬಂದಿದೆ. ಈ ದಾಳಿಯನ್ನ ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಹೇಳಿದೆ. ವಿಶ್ವದಾದ್ಯಂತ ಹ್ಯಾಕರ್ಗಳು ಸಕ್ರಿಯರಾಗಿದ್ದಾರೆ, ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಪಕ್ಷಗಳ ನಾಯಕರು ತಮ್ಮ ಆಂತರಿಕ ಕಚ್ಚಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಪರಿಸ್ಥಿತಿ ಹೇಗಿದೆ ಎಂಬುದು ದೇಶದ ಜನರಿಗೆ ತಿಳಿದಿದೆ. ಮೊದಲು ಅವರು ತಮ್ಮ ದೌರ್ಬಲ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಇದರಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಫೋನ್ಗಳನ್ನು ಕದ್ದಾಲಿಕೆ ಮಾಡುವ ಅವಶ್ಯಕತೆಯೂ ಸರ್ಕಾರಕ್ಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಏನಿದು ಆರೋಪ?
ತಮ್ಮ ಫೋನ್ಗಳ ಮೇಲೆ ಸರ್ಕಾರಿ ಪ್ರಾಯೋಜಕತ್ವದ ದಾಳಿ ನಡೆಯುತ್ತಿದೆ, ಕೇಂದ್ರದಿಂದ ಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂದು ಪ್ರತಿಪಕ್ಷಗಳ ವಿವಿಧ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಕಾಂಗ್ರೆಸ್ ನಾಯಕ ಶಶಿ ತರೂರ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಶಿವಸೇನಾದ (ಉದ್ಧವ್ ಬಣ) ಪ್ರಿಯಾಂಕಾ ಚತುರ್ವೇದಿ ಅವರು ತಮ್ಮ ಐ-ಫೋನ್ಗಳ ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿಕೋರರು ಟಾರ್ಗೆಟ್ ಮಾಡುತ್ತಿರಬಹುದು ಎಂದು ಆಪಲ್ ಕಂಪೆನಿಯಿಂದ ಫೋನ್ ಹಾಗೂ ಇ-ಮೇಲ್ಗಳಿಗೆ ಎಚ್ಚರಿಕೆ ಸಂದೇಶ ಬಂದಿರುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಕಚೇರಿಯಲ್ಲಿನ ಕೆಲವರಿಗೂ ಈ ಸಂದೇಶ ಬಂದಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸರ್ಕಾರ, ಈ ಸಂದೇಶಗಳ ಬಗ್ಗೆ ಅರಿವಿದೆ. ಐಫೋನ್ಗಳಲ್ಲಿ ಬೆದರಿಕೆ ಪತ್ತೆ ಮಾಡುವ ತಂತ್ರಜ್ಞಾನವು ಕೆಲವೊಮ್ಮೆ ಅಸಮಗ್ರ ಹಾಗೂ ಅಪೂರ್ಣವಾಗಿರುತ್ತದೆ ಎಂದು ಹೇಳಿದೆ.
ಆಪಲ್ನಿಂದ ಬಂದ ಸಂದೇಶದಲ್ಲಿ ಏನಿತ್ತು?
ನೀವು ಸರ್ಕಾರಿ ಪ್ರಾಯೋಜಿತ ದಾಳಿಕೋರರಿಂದ ಗುರಿಯಾಗುತ್ತಿದ್ದೀರಿ. ಅವರು ನಿಮ್ಮ ಆಪಲ್ ಐಡಿಗೆ ಸಂಬಂಧಿಸಿದ ಐಫೋನ್ಗೆ ದೂರದಿಂದ ಕದ್ದಾಲಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆಪಲ್ನ ಸಂದೇಶ ಹೇಳಿದೆ.
ಈ ದಾಳಿಕೋರರು ನೀವು ಯಾರು ಅಥವಾ ನೀವು ಏನು ಮಾಡುತ್ತೀರಿ ಎಂಬ ಆಧಾರದಲ್ಲಿ ನಿಮ್ಮನ್ನು ವ್ಯಕ್ತಿಗತವಾಗಿ ಟಾರ್ಗೆಟ್ ಮಾಡುತ್ತಿರುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಸೂಕ್ಷ್ಮ ಡೇಟಾ, ಸಂಹವನಗಳು ಅಥವಾ ಕ್ಯಾಮೆರಾ ಮತ್ತು ಮೈಕ್ರೋಫೋನ್ಗಳನ್ನು ಕದಿಯಲು ಅವರಿಗೆ ಸಾಧ್ಯವಾಗಲಿದೆ. ಇದು ಸುಳ್ಳು ಎಚ್ಚರಿಕೆಯಾಗುವ ಸಾಧ್ಯತೆ ಇದ್ದರೂ, ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಸಂದೇಶದಲ್ಲಿದೆ.
ಆಪಲ್ ಪ್ರತಿಕ್ರಿಯೆ ಏನು ಹೇಳಿಕೆಯಲ್ಲಿ ಏನಿದೆ?
ರಾಜ್ಯ ಪ್ರಾಯೋಜಿತ ದಾಳಿ ಕಾಲಾನಂತರದಲ್ಲಿ ವಿಕಸನಗೊಳ್ಳುತ್ತದೆ. ಈ ದಾಳಿಗಳನ್ನು ಪತ್ತೆಹಚ್ಚುವುದು ಕಷ್ಟ. ಅಪೂರ್ಣವಾಗಿರುವ ಬೆದರಿಕೆ ಗುಪ್ತಚರ ಸಂಕೇತಗಳ ಮೇಲೆ ಅವಲಂಬಿತವಾಗಿದೆ. ಆಪಲ್ನ ಕೆಲವೊಂದು ಬೆದರಿಕೆ ಸೂಚನೆಗಳು ತಪ್ಪು ಅಲಾರಂಗಳಾಗಿರಬಹುದು. ಈ ದಾಳಿಗಳು ಪತ್ತೆಯಾಗದಿರುವ ಸಾಧ್ಯತೆಯಿದೆ. ಈ ದಾಳಿಗಳನ್ನು ಪತ್ತೆಹಚ್ಚಲು ಸಾಧ್ಯವಿಲ್ಲ. ನಾವು ಬೆದರಿಕೆ ಅಧಿಸೂಚನೆಗಳನ್ನು ನೀಡಲು ಕಾರಣವೇನು ಎಂಬುದರ ಕುರಿತು ಮಾಹಿತಿಯನ್ನು ಒದಗಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ.
Web Stories