ಹೈದರಾಬಾದ್: ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ಅವರು ನಾನು ಮಿಸ್ಟೇಕ್ ಮಾಡಿದ್ದೇನೆ. ಶ್ರೀದೇವಿ ಅವರ ಬಗ್ಗೆ ನಾನು ಆ ರೀತಿಯ ಪ್ರತಿಕ್ರಿಯೆ ನೀಡಬಾರದಿತ್ತು ಎಂದು ಹೇಳಿದ್ದಾರೆ.
ಶ್ರೀದೇವಿ ಅವರು ದೊಡ್ಡ ಸಿನಿಮಾ ತಾರೆ, ಅವರ ಬಗ್ಗೆ ನಾನು ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಿದ್ದು ತಪ್ಪು ಎಂದು ರಾಜಮೌಳಿ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಬಾಹುಬಲಿಯ ಶಿವಗಾಮಿ ಪಾತ್ರಕ್ಕೆ ಶ್ರೀದೇವಿ ಅವರನ್ನು ಸಂಪರ್ಕಿಸಲಾಗಿತ್ತು, ಆದರೆ ಅವರು ಭಾರೀ ಸಂಭಾವನೆಯ ಬೇಡಿಕೆಯನ್ನು ಇಟ್ಟಿದ್ದರು. ಅಷ್ಟೇ ಅಲ್ಲದೇ ಹೈಫೈ ವ್ಯವಸ್ಥೆಯನ್ನು ಕೇಳಿದ್ದರು. ಅವರು ಸಿನಿಮಾಗೆ ಒಪ್ಪದೇ ಇದ್ದದ್ದು ನಮ್ಮ ಅದೃಷ್ಟ ಎಂದು ರಾಜಮೌಳಿ ಹೇಳಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.
ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಮಾಧ್ಯಮಗಳು ಶ್ರೀದೇವಿ ಅವರನ್ನು ಪ್ರಶ್ನಿಸಿದ್ದಾಗ, ಅಷ್ಟೊಂದು ದೊಡ್ಡ ಮೊತ್ತವನ್ನು ಕೇಳಿದ್ದರೆ ಚಿತ್ರರಂಗದಿಂದಲೇ ನನ್ನನ್ನು ಮನೆಗೆ ಕಳುಹಿಸುತ್ತಿದ್ದರು. ರಾಜಮೌಳಿ ಅವರು ಆ ರೀತಿ ಹೇಳಿದ್ದು ನನಗೆ ಬೇಸರವಾಗಿದೆ ಎಂದು ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: ಪ್ರಭಾಸ್, ರಾಣಾ, ಅನುಷ್ಕಾ, ತಮನ್ನಾ, ರಮ್ಯಕೃಷ್ಣಗೆ ಎಷ್ಟು ಸಂಭಾವನೆ ಸಿಕ್ಕಿದೆ?
ಇದೀಗ ರಾಜಮೌಳಿ ಪ್ರತಿಕ್ರಿಯಿಸಿ, ಯಾರು ಸರಿ ಯಾರು ತಪ್ಪು ಎನ್ನುವುದನ್ನು ಜನರೇ ನಿರ್ಧರಿಸಲಿ. ಆದರೆ ನಾನು ಆ ರೀತಿಯಾಗಿ ಪ್ರತಿಕ್ರಿಯೆ ನೀಡಬಾರದಿತ್ತು. ಹಲವು ವರ್ಷಗಳಿಂದ ದಕ್ಷಿಣ ಭಾರತ ಸಿನಿಮಾದದಲ್ಲಿ ನಟಿಸುತ್ತಿರುವ ಶ್ರೀದೇವಿ ಅವರ ಬಗ್ಗೆ ನನಗೆ ಗೌರವವಿದೆ. ಅವರಿಗೆ ನಾನು ಶುಭಾಶಯ ಕೋರುತ್ತೆನೆ ಅಷ್ಟೇ ಅಲ್ಲದೇ ಅವರ ಮಾಮ್ ಸಿನಿಮಾದ ಟ್ರೇಲರ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ರಾಜಮೌಳಿ ಬಗ್ಗೆ ಶ್ರೀದೇವಿ ಹೇಳಿದ್ದು ಏನು ಇಲ್ಲಿದೆ ಪೂರ್ಣ ಸುದ್ದಿ