ಮುಂಬೈ: ಎಸ್ಎಸ್ ರಾಜಮೌಳಿ ನಿರ್ದೇಶನದ ಬ್ಲಾಕ್ಬಸ್ಟರ್ ಹಿಟ್ ಚಿತ್ರ ಬಾಹುಬಲಿ ಯಲ್ಲಿ ನಟಿಸಲು ನಿರಾಕರಿಸಿದ್ದು ಯಾಕೆ ಎಂಬ ಬಗ್ಗೆ ಕೊನೆಗೂ ನಟಿ ಶ್ರೀದೇವಿ ಮೌನ ಮುರಿದಿದ್ದಾರೆ.
ರಾಜಮೌಳಿ ಅವರು ಇತ್ತೀಚಿನ ಎಲ್ಲಾ ಸಂದರ್ಶನಗಳಲ್ಲಿ ನನ್ನ ಬಗ್ಗೆ ಮಾತನಾಡಿದ್ದು ಕೇಳಿ ನಿಜಕ್ಕೂ ಶಾಕ್ ಆಗಿದೆ, ಬೇಜಾರಾಗಿದೆ ಎಂದು ಶ್ರೀದೇವಿ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.
ನನಗೆ ತುಂಬಾ ಆಶ್ಚರ್ಯ ಹಾಗೂ ಬೇಸರವಾಯ್ತು. ರಾಜಮೌಳಿ ತುಂಬಾ ಶಾಂತ ಹಾಗೂ ಘನತೆಯುಳ್ಳ ವ್ಯಕ್ತಿ. ಅವರೊಂದಿಗೆ ಕೆಲಸ ಮಾಡಲು(ಅವಕಾಶ ಸಿಕ್ಕಿದ್ದರೆ) ನನಗೆ ತುಂಬಾ ಸಂತೋಷವಿದೆ. ಆದ್ರೆ ಅವರು ಈ ವಿಚಾರದ ಬಗ್ಗೆ ಮಾತನಾಡಿದ ರೀತಿ ನೋಡಿ ನನಗೆ ತುಂಬಾ ದುಃಖವಾಗಿದೆ ಎಂದು ಶ್ರೀದೇವಿ ಹೇಳಿದ್ದಾರೆ.
ನಟಿ ಶ್ರೀದೇವಿ ಬಾಹುಬಲಿ 2 ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದು ಯಾಕೆ ಎಂಬ ನಿಜವಾದ ಕಾರಣ ಈವರೆಗೆ ಯಾರೂ ಬಹಿರಂಗಪಡಿಸಿಲ್ಲ. ಆದ್ರೆ ಶ್ರೀದೇವಿ ಹೆಚ್ಚಿನ ಸಂಭಾವನೆಗಾಗಿ ಡಿಮ್ಯಾಂಡ್ ಮಾಡಿದ್ದರು. ನಿರ್ದೇಶಕರು ಅಷ್ಟೊಂದು ಹೆಚ್ಚಿನ ಸಂಭಾವನೆ ಕೊಡಲು ತಯಾರಿರಲಿಲ್ಲ. ಹೀಗಾಗಿ ಶಿವಗಾಮಿ ಪಾತ್ರವನ್ನು ರಮ್ಯಾಕೃಷ್ಣ ನಿರ್ವಹಿಸಿದ್ರು ಎಂಬ ವದಂತಿಯೂ ಕೇಳಿ ಬಂದಿತ್ತು.
ಆದ್ರೆ ಇದನ್ನ ತಳ್ಳಿಹಾಕಿರುವ ಶ್ರೀದೇವಿ, ನಾನು ಹಾಗೆ ಮಾಡಿದ್ರೆ ಜನ ನನ್ನನ್ನ ಪ್ಯಾಕ್ ಮಾಡಿ ಕಳಿಸ್ತಿದ್ರು. ನಾನು ಈ ಥರ ಡಿಮ್ಯಾಂಡ್ ಮಾಡಿದ್ದೀನಿ ಎಂದು ನಿರ್ಮಾಪಕರು ತಪ್ಪಾಗಿ ರಾಜಮೌಳಿ ಅವರಿಗೆ ಹೇಳಿದ್ದಾರೇನೋ ಗೊತ್ತಿಲ್ಲ. ಆದ್ರೆ ಈ ರೀತಿ ಮಾತನಾಡೋದು ಸರಿಯಲ್ಲ ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ನಿರೂಪಕರು ಶ್ರೀದೇವಿ ಈ ಚಿತ್ರವನ್ನ ನಿರಾಕರಿಸಿದ್ದು ಯಾಕೆ ಎಂದು ಕೇಳಬೇಕಿತ್ತು. ಆದ್ರೆ ಅದರ ಬದಲು ಜನರ ಮೆಚ್ಚುಗೆಗೆ ಪಾತ್ರವಾಗಿರೋ ಬಾಹುಬಲಿ ಚಿತ್ರ ನೋಡಿದ್ರಾ ಎಂದು ಕೇಳಿದ್ರು. ಇದಕ್ಕೆ ಉತ್ತರಿಸಿದ ಶ್ರೀದೇವಿ, ಇಲ್ಲ. ನಿಜ ಹೇಳ್ಬೇಕು ಅಂದ್ರೆ ನಾನು ಈ ಚಿತ್ರವನ್ನ ನೋಡಿಲ್ಲ. ಆದ್ರೆ ನಾನು ಒಂದು ವಿಚಾರದ ಬಗ್ಗೆ ಮಾತನಾಡ್ಬೇಕು. ಇದು ದೊಡ್ಡ ಸುದ್ದಿಯಾಗಿದೆ. ಜನ ಇಷ್ಟಬಂದಂತೆ ಊಹೆ ಮಾಡಿಕೊಳ್ತಿದ್ದಾರೆ. ಇದಕ್ಕೆ ನನ್ನದೇ ಆದ ಕಾರಣಗಳಿವೆ. ಈಗಾಗಲೇ ಬಾಹುಬಲಿಯ ಎರಡು ಭಾಗಗಳು ಬಂದಿವೆ. ಆದ್ರೆ ಈಗ ಅದರ ಬಗ್ಗೆ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ನಾನು ನಿರಾಕರಿಸಿದ ಅನೇಕ ಚಿತ್ರಗಳಿವೆ. ಅದರ ಬಗ್ಗೆ ಯಾಕೆ ಮಾತಾಡ್ತಿಲ್ಲ? ಈ ಚಿತ್ರದ ಬಗ್ಗೆ ಮಾತ್ರ ಯಾಕೆ? ನಾನು ಅಲ್ಲಿಗೆ ಹೋಗಿ ಮಾತಾಡ್ತೀನಿ ಅಂದ್ರು.