ಉಡುಪಿ: ನನ್ನ ಜೀವನದಲ್ಲಿ ಈ ದಿನ ಬರಬಹುದೆಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಪೇಜಾವರಶ್ರೀ ಅವರು ಹೇಳಿದ್ದಾರೆ.
ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪೇಜಾವರಶ್ರೀ, ನನ್ನ ಜೀವನದಲ್ಲಿ ಈ ದಿನ ಬರಬಹುದೆಂದು ನಿರೀಕ್ಷೆ ಮಾಡಿರಲಿಲ್ಲ. ರಾಮಮಂದಿರ ಬಗ್ಗೆ ಬಹಳ ನಿರಾಶನಾಗಿದ್ದೆ. ನನಗೆ ಬಹಳ ವಯಸ್ಸಾಗಿರುವುದರಿಂದ ರಾಮಮಂದಿರದ ಆಸೆ ಕಳೆದುಕೊಂಡಿದ್ದೆ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ನಾನು ಬಹಳ ನಿರೀಕ್ಷೆಯಿಂದ ತೀರ್ಪನ್ನು ಎದುರು ನೋಡುತ್ತಿದ್ದೇನೆ. ರಾಮಮಂದಿರ ಇಡೀ ದೇಶದ ಜನರ ಕನಸು, ರಾಮ ಮಂದಿರದ ಸ್ವಲ್ಪ ದೂರದಲ್ಲಿ ಮಸೀದಿ ಕೂಡ ನಿರ್ಮಾಣವಾಗಲಿ. ಇಂದಿನ ತೀರ್ಪು ಯಾರ ಪರವಾದರೂ, ಯಾರ ವಿರುದ್ಧವಾದರೂ ಸೌಹಾರ್ದತೆ ಮುಖ್ಯ. ಸಂವಿಧಾನಕ್ಕೆ ಭಂಗವಾಗಬಾರದು. ಕಾನೂನಿನ, ಕೋರ್ಟಿನ ವಿರುದ್ಧ ವರ್ತನೆ ಬೇಡ ಎಂದು ವಿನಂತಿಸಿದರು.
ರಾಜ್ಯದಲ್ಲಿ ಸಂಘರ್ಷಗಳು ನಡೆದರೆ ಉಪವಾಸ ಕೂರುವುದಾಗಿ ಎಚ್ಚರಿಕೆ ನೀಡಿದ್ದಾರೆ. ಭಾನುವಾರ ದೆಹಲಿಯಲ್ಲಿ ಸಂತರ ಶಾಂತಿಸಭೆಯಲ್ಲಿ ಪಾಲ್ಗೊಳ್ಳುತ್ತೇನೆ. ಮುಂದೆ ಅಯೋಧ್ಯೆಗೆ ಕೂಡ ಭೇಟಿಯಾಗುವ ಆಲೋಚನೆ ಇದೆ ಎಂದು ಹೇಳಿದರು.