ದಾವಣಗೆರೆ: ಪೊಲೀಸರು ಹಾಗೂ ಪೋಷಕರು ಪ್ರೇಯಸಿಯನ್ನು ದೂರ ಮಾಡಿದ್ದಕ್ಕೆ ಮನನೊಂದು ಪ್ರಿಯಕರ ಸೆಲ್ಫಿ ವಿಡಿಯೋ ಮಾಡಿದ ಘಟನೆ ದಾವಣಗೆರೆಯ ಹದಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ದಾವಣಗೆರೆಯ ಲೋಕಿಕೆರೆ ಗ್ರಾಮದ ಯುವತಿಯೊಬ್ಬಳನ್ನು ಬಳ್ಳಾರಿಯ ರಾಜೇಂದ್ರ ಪ್ರೀತಿಸುತ್ತಿದ್ದರು. ಯುವತಿಯ ಮನೆಯಲ್ಲಿ ಬೇರೆ ಯುವಕನ ಜೊತೆ ಮದುವೆ ಮಾಡಲು ತಯಾರಿ ನಡೆದಿತ್ತು. ಇದರಿಂದ ಪ್ರೇಮಿಗಳಿಬ್ಬರು ಮನೆ ಬಿಟ್ಟು ಹೋಗಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು.
ಪೊಲೀಸರು ಬಳ್ಳಾರಿ ಮಹಿಳಾ ಠಾಣೆಯಲ್ಲಿ ಯುವತಿಯಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದರು. ನಂತರ ವಿಚಾರಣೆಗೆ ಕರೆಸಿ ದಾವಣಗೆರೆಯ ಹದಡಿ ಠಾಣಾ ಪೊಲೀಸರು ಪ್ರೇಮಿಗಳನ್ನು ದೂರ ಮಾಡಿದ್ದಾರೆ.
ತನ್ನ ಪ್ರೇಯಸಿಯಿಂದ ದೂರವಾಗಿದರಿಂದ ಪ್ರಿಯಕರ ರಾಜೇಂದ್ರ ಮನನೊಂದು ತಾಯಿಗೆ ಸೆಲ್ಫಿ ವಿಡಿಯೋ ಕಳಿಸಿ ತನ್ನ ನೋವನ್ನು ಹೇಳಿಕೊಂಡಿದ್ದಾನೆ. ಪೊಲೀಸರು ಹಾಗೂ ಆಕೆಯ ಪೋಷಕರು ನಮ್ಮಿಬ್ಬರನ್ನು ದೂರ ಮಾಡಿದ್ದಾರೆ. ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡು ಉಳಿಯುವುದು ವೇಸ್ಟ್. ನನ್ನನ್ನು ಕ್ಷಮಿಸಿ ಎಂದು ತಾಯಿಗೆ ವಿಡಿಯೋ ಕಳುಹಿಸಿದ್ದನು.
ಇದರಿಂದ ಅತಂಕಗೊಂಡ ತಾಯಿ ಪುಷ್ಪ ರಾಜೇಂದ್ರ ಸ್ನೇಹಿತರ ಜೊತೆ ಸೇರಿ ತನ್ನ ಮಗನನ್ನು ಹುಡುಕಾಟ ನಡೆಸುತ್ತಿದ್ದಾರೆ.