ಚಿಕ್ಕಮಗಳೂರು: ಪತ್ನಿಯ ಶೀಲ ಶಂಕಿಸಿ ಕುಡುಗೋಲಿನಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ತರೀಕೆರೆ ತಾಲೂಕಿನ ಹಿರೇಖಾನವಂಗಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಿರೇಖಾನವಂಗಲ ಗ್ರಾಮದ ನಿವಾಸಿ ಗಂಗಾಧರಪ್ಪ ಪತ್ನಿಯನ್ನೇ ಕೊಲೆ ಮಾಡಿದ ಪಾಪಿ ಪತಿರಾಯ. ಮಂಜಮ್ಮ(45) ಮೃತ ದುರ್ದೈವಿ.
ಪತ್ನಿಯ ಶೀಲ ಶಂಕಿಸಿ ಗಂಗಾಧರಪ್ಪ ಯಾವಾಗಲೂ ಕುಡಿದು ಬಂದು ಜಗಳವಾಡುತ್ತಿದ್ದನು. ಆದರೆ ಸೋಮವಾರ ಮನೆಗೆ ಕುಡಿದು ಬಂದಿದ್ದ ಗಂಗಾಧರಪ್ಪ ಏಕಾಏಕಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದನು. ಕುಡುಗೋಲಿನಿಂದ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದನು.
ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದರು. ಮಂಗಳವಾರ ರಾತ್ರಿ ತಲೆಮರೆಸಿಕೊಂಡಿದ್ದ ಗಂಗಾಧರಪ್ಪನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣ ಸಂಬಂಧ ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ.