– ಅಳಿಯನ ಮೇಲೆ ಕೊಲೆ ಆರೋಪ
ಗದಗ: ಪೊಲೀಸ್ ಪೇದೆ ತನ್ನ ಪತ್ನಿಗೆ ಕಿರುಕುಳ ನೀಡಿ ನೇಣುಬಿಗಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿರುವ ಘಟನೆ ನಗರದ ಶಹಪೂರಪೇಟೆ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ನಡೆದಿದೆ.
ಲಕ್ಷ್ಮಿ (27) ಮೃತ ಪೊಲೀಸ್ ಪೇದೆ ಪತ್ನಿ. ಈಕೆಯ ಪತಿ ಹೇಮಂತಪ್ಪ ಪರಸಣ್ಣವರ್ ಗದಗ ಗ್ರಾಮೀಣ ಮುಖ್ಯ ಪೊಲೀಸ್ ಪೇದೆಯಾಗಿದ್ದನು. ಅಳಿಯನೇ ತಮ್ಮ ಮಗಳನ್ನು ಕೊಲೆ ಮಾಡಿ ನೇಣಿಗೆ ಹಾಕಿದ್ದಾನೆ ಎಂದು ಮೃತ ಲಕ್ಷ್ಮಿ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
ಪ್ರತಿದಿನ ಕಿರುಕುಳ ನೀಡುತ್ತಿರುವುದನ್ನ ಸ್ವತಃ ಪತಿಯೇ ವಿಡಿಯೋ ಮಾಡುತ್ತಿದ್ದನು. ಮನೆಯ ಮುಂಭಾಗ ಅಟ್ಟಾಡಿಸಿಕೊಂಡು ಪತ್ನಿಗೆ ಹೊಡೆದಿರುವುದನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ. ಅತ್ತೆ, ಮಾವ ಅಲ್ಲಿಯೇ ಕೂತಿದ್ದರೂ ಬಿಡಿಸಿಕೊಳ್ಳದೇ ಮಗನಿಗೆ ಪ್ರಚೋದನೆ ನೀಡುತ್ತಿರುವುದು ವಿಡಿಯೋನಲ್ಲಿ ಸೆರೆಯಾಗಿದೆ.
ಕಳೆದ 8 ವರ್ಷಗಳಿಂದ ಕಿರುಕುಳ ನೀಡುತ್ತಾ ಬರುತ್ತಿದ್ದಾನೆ. ಹೇಮಂತಪ್ಪ ಚಹಾ ಮಾಡು ಬಂದು ಕುಡಿದು ನಿನ್ನ ನೇಣುಹಾಕುವುದಾಗಿ ಮಗಳಿಗೆ ಹೇಳಿ ಹೋಗಿದ್ದನು. ಮಗಳು ನಮಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ. ನಾವು ಎಷ್ಟೇ ಅಂಗಲಾಚಿ ಬೇಡಿಕೊಂಡರೂ ಬಿಡಲಿಲ್ಲ. ಕೊನೆಗೆ ಮಗಳನ್ನು ಹೊಡೆದು, ಕಿರುಕುಳ ನೀಡಿ ನೇಣು ಬಿಗಿದು ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪ ಮಾಡಿದ್ದಾರೆ.
ಹೀಗಾಗಿ ಪೋಷಕರು ಪತಿ ಹೇಮಂತಪ್ಪ, ಮಾವ ಬಸವಂತಪ್ಪ ಹಾಗೂ ಅತ್ತೆ ಯಲ್ಲವ್ವ ಸೇರಿಕೊಂಡು ಕೊಲೆ ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯಕ್ಕೆ ಮೂವರು ನಾಪತ್ತೆಯಾಗಿದ್ದಾರೆ. ಗದಗ ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.