ಹುಬ್ಬಳ್ಳಿ: ಮೈತ್ರಿ ಸರ್ಕಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ನಮಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದಲ್ಲಿನ ನ್ಯೂನತೆಗಳ ಬಗ್ಗೆ 11 ಎಂ.ಎಲ್.ಸಿಗಳು ವರಿಷ್ಠರಿಗೆ ಹೇಳಿದ್ದೇವೆ. ಹೆಚ್ಡಿಕೆ ನಾಯಕತ್ವದ ಬಗ್ಗೆ ಯಾರೂ ಪ್ರಶ್ನೆ ಮಾಡಿಲ್ಲ. ಪಕ್ಷದಲ್ಲಿ ನ್ಯೂನತೆ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡರು ಸರಿಪಡಿಸುತ್ತಾರೆ ಎಂದಿದ್ದಾರೆ ನೋಡೋಣ ಎಂದರು.
ದೇವೇಗೌಡರು ಸರಿಪಡಿಸುವ ಕೆಲಸ ಮಾಡಿದರೆ ಸರಿ ಆಗುತ್ತದೆ. ಇಲ್ಲದಿದ್ದರೆ ನಾವೇನೂ ಮಾಡಕ್ಕೆ ಆಗಲ್ಲ. ಜೆಡಿಎಸ್ ಪಕ್ಷದಲ್ಲಿನ ಆಂತರಿಕ ಕಲಹ ಸರಿಯಾಗಬೇಕು. ಇಲ್ಲದಿದ್ದರೇ ಮುಂದೆ ನಾವು ವಿಚಾರ ಮಾಡುತ್ತೇವೆ ಎಂದು ಜೆಡಿಎಸ್ ಪಕ್ಷಕ್ಕೆ ಬಸವರಾಜ ಹೊರಟ್ಟಿ ವಾರ್ನಿಂಗ್ ನೀಡಿದ್ದಾರೆ.
ಇದೇ ವೇಳೆ ಮಾಜಿ ಸಚಿವ ಸಾರಾ ಮಹೇಶ್ ಹಾಗೂ ಅನರ್ಹ ಶಾಸಕ ಹೆಚ್ ವಿಶ್ವನಾಥ್ ಅವರ ಆಣೆ ಪ್ರಮಾಣ ವಿಚಾರವಾಗಿ ಪ್ರತಿಕ್ರಿಯಿಸಿದ ಹೊರಟ್ಟಿ, ರಾಜಕಾರಣವನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಬಾರದು. ಆಣೆ ಪ್ರಮಾಣ ವಿಚಾರ ನಿಲ್ಲಿಸಲು ಇಬ್ಬರಿಗೂ ಹೇಳಿದ್ದೇನೆ. ಸುಮ್ಮನೆ ಪ್ರಾಬ್ಲಮ್ ಕ್ರಿಯೇಟ್ ಮಾಡಬೇಡಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.