ಹುಬ್ಬಳ್ಳಿ: ಬಿಜೆಪಿಯವರ ನಡೆ ಸರಿಯಾಗಿಲ್ಲ. ಬಿಜೆಪಿಯವರ ಬಹಿರಂಗವಾಗಿ ವ್ಯಾಪಾರಕ್ಕೆ ಇಳಿದಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಗ್ಯಾರಂಟಿ ಬರುತ್ತದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿಲ್ಲ. ನಂಜುಂಡಪ್ಪ ವರದಿಯನ್ನು ಸರಿಯಾಗಿ ಅನುಷ್ಠಾನ ಮಾಡಿಲ್ಲ. ಮಹದಾಯಿ ವಿಷಯದಲ್ಲಿ ಸರ್ಕಾರ ಏನು ಮಾಡಿದೆ. ಜಿಂದಾಲ್ ಉಳಿಸಿಕೊಳ್ಳಲು ಒಬ್ಬ ಮಂತ್ರಿಯನ್ನು ನೇಮಕ ಮಾಡುತ್ತಾರೆ. ಆದರೆ ಮಹದಾಯಿ ವಿಷಯದಲ್ಲಿ ಒರ್ವ ಮಂತ್ರಿಯನ್ನು ನೇಮಕ ಮಾಡಿಲ್ಲ ಎಂದು ಗರಂ ಆದರು.
ಅಗಸ್ಟ್ 12 ರಂದು ಕರ್ನಾಟಕದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಮಾಡುತ್ತೇನೆ. ಬೀದರ್ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಲಗಿ ಹೋರಾಟ ಮಾಡುತ್ತೇನೆ. ಉತ್ತರ ಕರ್ನಾಟಕ ಕುಡಿಯುವ ನೀರು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಈ ಹೋರಾಟ ಮಾಡುವುದಾಗಿ ಎಚ್ಚರಿಕೆ ನಿಡಿದರು.
ಶಾಸಕರು, ಹಾದಿ ಬೀದಿಯಲ್ಲಿ ಹೋಗುವವರಿಗೆ ರಾಜೀನಾಮೆ ಕೊಡೋಕೆ ಆಗೋದಿಲ್ಲ. ರಾಜ್ಯಪಾಲರಿಗೆ ರಾಜೀನಾಮೆ ಕೊಡುವ ಬದಲು ಸ್ಪೀಕರ್ ಅವರಿಗೆ ಕೊಡಬೇಕು. ಇದು ಬ್ಲ್ಯಾಕ್ಮೇಲ್ ತಂತ್ರವಾಗಿದೆ ಎಂದರು.
ಈ ಹಿಂದೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಕೂಡ ಮಧ್ಯಂತರ ಚುನಾವಣೆ ಬರಬಹುದು ಎಂದು ಹೇಳಿಕೆ ನಿಡಿದ್ದರು. ತಮ್ಮ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಒಳಗಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿದರು. ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಅವರು ಉತ್ತಮ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮೈತ್ರಿ ಸರ್ಕಾರದಲ್ಲೂ ಮುಂದುವರಿಸಲಾಗಿದೆ. ಮೈತ್ರಿ ಸರ್ಕಾರ ಉಳಿಯವುದು ಬಿಡುವುದು ಕಾಂಗ್ರೆಸ್ ಹೈಕಮಾಂಡ್ಗೆ ಬಿಟ್ಟು ಕೊಟ್ಟಿದ್ದೇನೆ. ಸದ್ಯ ಪಕ್ಷದ ಸಂಘಟನೆಯಲ್ಲಿ ತಾವು ತೊಡಗಿದ್ದೇವೆ ಎಂದು ಹೇಳಿದ್ದರು.
ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೆಲ ಸ್ಥಾನಗಳಿಗೆ ಮಧ್ಯಂತರ ಚುನಾವಣೆಗಳು ಮುಂದಿನ ಅವಧಿಯಲ್ಲಿ ಬರುತ್ತಿದ್ದು, ಈ ಚುನಾವಣೆಯಲ್ಲಿ ನಾವು ಕಳೆದುಕೊಂಡ ಸ್ಥಾನಗಳ ಬಗ್ಗೆ ಮಾತನಾಡಿದ್ದೇನೆ. ಮತ್ತೆ ಜನರ ವಿಶ್ವಾಸ ಗಳಿಸಿ ತಳ ಮಟ್ಟದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇನೆ. ಈ ಬಗ್ಗೆ ನಾನು ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು.