– ಉಡುಪಿ ಡಿಸಿ ಜಿ.ಜಗದೀಶ್ ಆದೇಶ
ಉಡುಪಿ: ವಿದೇಶದಿಂದ ಬಂದು 28 ದಿನ ಗೃಹ ಬಂಧನದಲ್ಲಿ ಇರದೇ ಬೇಕಾಬಿಟ್ಟಿ ಸುತ್ತಾಡಿದ್ರೆ ನಿಮ್ಮ ಪಾಸ್ಪೋರ್ಟ್ ಮುಟ್ಟುಗೋಲು ಹಾಕುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಗೃಹ ಬಂಧನದಲ್ಲಿರುವವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಕೊರೊನಾ ಹರಡದಂತೆ ಕೇಂದ್ರ ಸರ್ಕಾರ ಏಪ್ರಿಲ್ 14ರವರೆಗೆ ಲಾಕ್ಡೌನ್ ಘೋಷಿಸಿದೆ. ಆದರೆ ಆದೇಶ ಉಲ್ಲಂಘಿಸಿ ಶಂಕಿತರು ಸುತ್ತಾಡುವ ಮಾಹಿತಿ ಸಾರ್ವಜನಿಕರಿಂದ ಸಿಕ್ಕಿದೆ. ಒಂದೊಂದು ಮನೆಗೆ ಮೂರು ಬಾರಿ ಅಧಿಕಾರಿಗಳು, ಪೊಲೀಸರು, ಆರೋಗ್ಯ ಇಲಾಖೆಯವರು ಭೇಟಿ ಕೊಡಲು ಸೂಚನೆ ಕೊಟ್ಟಿದ್ದೇನೆ. ಆದೇಶ ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆ ಎಂದು ಬಿಸಿ ಮುಟ್ಟಿಸಿದ್ದಾರೆ.
ಪಾಸ್ಪೋರ್ಟ್ ಮುಟ್ಟುಗೋಲು ಹಾಕಿಸುತ್ತೇನೆ. ಮುಂದೆ ವಿದೇಶ ಪ್ರಯಾಣ ಮಾಡದಂತೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಡಿಸಿ ಖಡಕ್ ಎಚ್ಚರಿಗೆ ಮುಟ್ಟಿಸಿದ್ದಾರೆ. ಜಿಲ್ಲೆಯಲ್ಲಿ 1,400 ಮಂದಿ ಗೃಹ ಬಂಧನದಲ್ಲಿ ಇದ್ದು, ಸುತ್ತಮುತ್ತಲ ಮನೆಗಳಿಗೂ ಅವರನ್ನು ಕಾಯುವ ಜವಾಬ್ದಾರಿಯನ್ನು ವಹಿಸಿದ್ದೇವೆ. ಒಂದೆರಡು ಜನ ಮಾತು ಕೇಳದವರಿಂದ ಇಡೀ ಸಮಾಜಕ್ಕೆ ಆತಂಕ ಇದೆ. ಜನ ಜವಾಬ್ದಾರಿಯನ್ನು ಅರಿಯಬೇಕು. ಪರಿಸ್ಥಿತಿ ತಿಳಿದುಕೊಳ್ಳಬೇಕು ಎಂದು ತಿಳಿಸಿದ್ದಾರೆ.