– ಖುದ್ದು ಜೈಲರ್ ಸಮ್ಮುಖದಲ್ಲೇ ಮುಸ್ಲಿಂ ಕೈದಿಗಳಿಂದ ಹಲ್ಲೆ ನಡೆಸಿರುವ ಆರೋಪ
– ಹಿಂದೂ ಸಂಘಟನೆಗಳಿಂದ ಕ್ರಮಕ್ಕೆ ಒತ್ತಾಯ
ವಿಜಯಪುರ: ಇದೇ ಜನವರಿ 22ರಂದು ಅಯೋಧ್ಯೆ ಶ್ರೀರಾಮಮಂದಿರದಲ್ಲಿ (Ram Mandir) ಬಾಲಕ ರಾಮನ ಪ್ರಾಣಪ್ರತಿಷ್ಠೆ ನೆರವೇರಿತು. ಇದೇ ಸಮಯಕ್ಕೆ ಶ್ರೀರಾಮನ ಭಕ್ತರು ದೇಶಾದ್ಯಂತ ವಿಶೇಷ ಪೂಜೆ-ಪುನಸ್ಕಾರಗಳನ್ನ ನೆರವೇರಿಸಿದ್ದರು.
ಅದರಂತೆ ವಿಜಯಪುರದ ಜೈಲಿನಲ್ಲಿಯೂ (Vijaypura Jail) ಕೆಲ ಕೈದಿಗಳು ಜೈಲಿನಲ್ಲಿ ರಾಮೋತ್ಸವ ಆಚರಣೆ ಮಾಡಿದ್ದರು. ಇದನ್ನು ಸಹಿಸದ ಕೆಲವು ಅಧಿಕಾರಿಗಳು ಮುಸ್ಲಿಂ ಖೈದಿಗಳಿಂದ ಹಿಂದೂ ಕೈದಿಗಳ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವಿಜಯಪುರದ ಕೇಂದ್ರ ಕಾರಾಗೃಹದ ದರ್ಗಾ ಜೈಲ್ನಲ್ಲಿ ಘಟನೆ ನಡೆದಿದ್ದು, ಜೈಲಿನಲ್ಲಿ ರಾಮೋತ್ಸವ ಆಚರಿಸಿದ್ದಕ್ಕಾಗಿ ಹಿಂದೂ ಕೈದಿಗಳ (Prisoners) ಮೇಲೆ ಹಲ್ಲೆ ಮಾಡಿಸಿದ್ದಾರೆ ಎನ್ನಲಾಗಿದೆ.
ಜ.22ರಂದು ಪ್ರಾಣಪ್ರತಿಷ್ಠೆ ಸಮಯಕ್ಕೆ ಜೈಲಿನಲ್ಲಿದ್ದ ಮಹಾರಾಷ್ಟ್ರ ಮೂಲದ ಪರಮೇಶ್ವರ ಜಾಧವ (ದೇವಾ), ರಮೇಶ ದಳವಿ, ಪ್ರದೀಪ ಮಾನೆ ಎಂಬ ಹಿಂದೂ ಕೈದಿಗಳು ಸೆಲ್ನಲ್ಲೇ ಶ್ರೀರಾಮೋತ್ಸವ ಆಚರಣೆ ಮಾಡಿದ್ದರು. ಇದರಿಂದ ಕೋಪಗೊಂಡ ಜೈಲರ್ ತನ್ನ ಕಚೇರಿಗೆ ಕರೆಸಿ ಮುಸ್ಲಿಂ ಕೈದಿಗಳಿಂದ ಹಲ್ಲೆ ಮಾಡಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಜೈಲ್ನಲ್ಲಿರುವ ಶೇಖ್ ಅಹ್ಮದ್ ಹಾಗೂ ಸಹಚರರಿಂದ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹಲ್ಲೆಗೆ ಜೈಲಿನಲ್ಲಿರುವ ಇತರ ಮುಸ್ಲಿಂ ಅಧಿಕಾರಿಗಳೂ ಸಾಥ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಆರೋಪ ಮಾಡಿರುವ ವೀಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಜೈಲರ್ ನಡೆಯನ್ನು ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಸಂಬಂಧ ಪಟ್ಟ ಅಧಿಕಾರಿ ಹಾಗೂ ಹಲ್ಲೆ ನಡೆಸಿದ ಇತರ ಕೈದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ.