ಮುಂಬೈ: ಇಂಟರ್ ನೆಟ್ ಸ್ಟಾರ್ ರಾನು ಮೊಂಡಲ್ ಅವರಿಗೆ ಸಿನಿಮಾದಲ್ಲಿ ಅವಕಾಶ ನೀಡಿದ್ದೇಕೆ ಎಂಬುದನ್ನು ಗಾಯಕ ಹಿಮೇಶ್ ರೇಶ್ಮಿಯಾ ರಿವೀಲ್ ಮಾಡಿದ್ದಾರೆ.
ಹಿಮೇಶ್ ಅವರು ತಮ್ಮ ಮುಂಬರುವ ‘ಹ್ಯಾಪಿ ಹಾರ್ಡಿ ಔರ್ ಹೀರ್’ ಚಿತ್ರದ ಪ್ರಮೋಶನ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಖಾಸಗಿ ವಾಹಿನಿಯಲ್ಲಿ ಸಂದರ್ಶನ ನೀಡುವಾಗ ರಾನು ಮೊಂಡಲ್ ಅವರ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಅವರಿಗೆ ಸಿನಿಮಾದಲ್ಲಿ ಹಾಡಲು ಅವಕಾಶ ನೀಡಿದ್ದು ಏಕೆ ಎಂಬ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.
ನನ್ನ ಚಿತ್ರದ 5-6 ಹಾಡುಗಳು ರೆಕಾರ್ಡ್ ಆಗಿತ್ತು. ಉಳಿದ ಹಾಡುಗಳಿಗೆ ಕೆಲವು ಅಂಶಗಳನ್ನು ಹುಡುಕುತ್ತಿದ್ದೆ. ನನ್ನ ಚಿತ್ರಕ್ಕಾಗಿ ನಾನು ಎಂತಹ ಮಹಿಳಾ ಗಾಯಕಿಯನ್ನು ಹುಡುಕುತ್ತಿದ್ದೆ ಎಂದರೆ ಆ ಕಾಲದಲ್ಲಿ ಲತಾ ಅವರು ಹೇಗೆ ಹಾಡುತ್ತಿದ್ದರೋ ಈ ಕಾಲದಲ್ಲಿ ಅವರ ಧ್ವನಿಯಂತೆ ಇರುವ ಮಹಿಳಾ ಗಾಯಕಿಯನ್ನು ಹುಡುಕುತ್ತಿದ್ದೆ ಎಂದು ಹೇಳಿದ್ದಾರೆ.
ರಾನು ಅವರು ರಿಯಾಲಿಟಿ ಶೋಗೆ ಬಂದಾಗ ಇವರು ನನ್ನ ಚಿತ್ರದಲ್ಲಿ ಹಾಡಲು ಪರ್ಫೆಕ್ಟ್ ಎಂದು ನನಗೆ ಅನಿಸಿತ್ತು. ನಾನು ಒಂದು ಕನೆಕ್ಷನ್ ಹುಡುಕುತ್ತಿದೆ. ಅದು ನನಗೆ ರಾನು ಅವರ ಧ್ವನಿಯಲ್ಲಿ ಸಿಕ್ಕಿತ್ತು. ಅವರು ರಿಯಾಲಿಟಿ ಶೋನಲ್ಲಿ ಕೇವಲ 2 ನಿಮಿಷ ‘ಏಕ್ ಪ್ಯಾರ್ ಕಾ ನಗ್ಮಾ ಹೇ’ ಹಾಡನ್ನು ಹಾಡಿದ್ದರು. ಅಂದು ಅವರು ಆ 2 ನಿಮಿಷದಲ್ಲಿ ಅಷ್ಟು ಚೆನ್ನಾಗಿ ಹಾಡಿರಲಿಲ್ಲ ಎಂದರೆ ಇಂದು ಇದೆಲ್ಲಾ ಆಗಲು ಸಾಧ್ಯವಿರುತ್ತಿರಲಿಲ್ಲ ಎಂದರು.
ರಾನು ಅವರ ಹಾಡು ಕೇಳಿದ ಮರುದಿನವೇ ನಾನು ಅವರಿಗೆ ಕರೆ ಮಾಡಿ ಸಿನಿಮಾದಲ್ಲಿ ಹಾಡುವಂತೆ ಹೇಳಿದೆ. ಅವರು ನನ್ನ ಮಾತು ಕೇಳಿ ಹಾಡು ಕೂಡ ಹಾಡಿದ್ದರು. ನಂತರ ರಾನು ಅವರು ಹಾಡಿದ ಹಾಡನ್ನು ನಾನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ ಅಷ್ಟೇ. ನಂತರ ನಾನು ಏನೂ ಮಾಡಿಲ್ಲ. ಜನರೇ ಎಲ್ಲವನ್ನು ಮಾಡಿದ್ದಾರೆ. ‘ತೇರಿ ಮೇರಿ ಕಹಾನಿ’ ಈಗ ಗ್ಲೋಬಲ್ ನಂಬರ್ 1 ಹಾಡು ಆಗಿದೆ ಎಂದು ಹಿಮೇಶ್ ತಿಳಿಸಿದ್ದಾರೆ.