ಬೆಂಗಳೂರು: ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ (Bengaluru Mysuru Expressway) ಅಪಘಾತ ನಿಯಂತ್ರಣಕ್ಕೆ ಹೆದ್ದಾರಿ ಪ್ರಾಧಿಕಾರ ಹೈಟೆಕ್ ಟಚ್ ನೀಡಿದ್ದು, ಹೈವೇ ಸ್ಪೀಡ್ ಲಿಮಿಟ್ ಅನ್ನು ಮೀರಿದರೇ, ಗಾಡಿ ಫೋಟೋ ಸಮೇತ ಮನೆಗೆ ನೋಟಿಸ್ ಬರುವುದರ ಜೊತೆಗೆ ಕೇಸ್ ಕೂಡ ದಾಖಲು ಮಾಡುವ ವ್ಯವಸ್ಥೆ ಮಾಡಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು – ಮೈಸೂರು ನಡುವೆ ನೂತನವಾಗಿ ಉದ್ಘಾಟನೆಯಾಗಿರುವ ಎಕ್ಸ್ಪ್ರೆಸ್ ವೇಯಲ್ಲಿನ ಅಪಘಾತ ಪ್ರಕರಣ ತಗ್ಗಿಸಲು ಮುಂದಾಗಿದೆ. ಹೆದ್ದಾರಿಯಲ್ಲಿ ಹೈಟೆಕ್ ಕ್ಯಾಮೆರಾಗಳ (Camera) ಅಳವಡಿಕೆ ಮಾಡುವುದರ ಮೂಲಕ ಸವಾರರ ಸ್ಪೀಡ್ ಮೇಲೆ ಕಣ್ಣಿಡಲು ಮುಂದಾಗಿದೆ. ಹೆದ್ದಾರಿಯಲ್ಲಿ ಸಂಚಾರಕ್ಕೆ ಅನುವು ಸಿಕ್ಕ ಬಳಿಕ ಮಾರ್ಗದಲ್ಲಿ ಬರೊಬ್ಬರಿ 335ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ಸಂಭವಿಸಿವೆ. ಸುಮಾರು 85ಕ್ಕೂ ಹೆಚ್ಚು ಸವಾರರು ಪ್ರಾಣ ಬಿಟ್ಟಿದ್ದಾರೆ.
ರಸ್ತೆ ಕ್ಲಿಯರ್ ಇದೆ ಎಂಬ ಕಾರಣಕ್ಕೆ ಅತಿ ವೇಗದ ಚಾಲನೆಯಿಂದಲೇ ಅಪಘಾತ (Accident) ಪ್ರಕರಣ ಹೆಚ್ಚಾದದ್ದನ್ನು ಅರಿತ ಹೈವೇ ಪ್ರಾಧಿಕಾರ, ಸದ್ಯ ಸ್ಪೀಡ್ ಲಿಮಿಟ್ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ತಂತ್ರಜ್ಞಾನದ ಮೊರೆ ಹೋಗಿದೆ. ಸಂಪೂರ್ಣ ಮಾರ್ಗದಲ್ಲಿ ಪ್ರತಿ 800 ಮೀ.ಗೊಂದು ಹೈಟೆಕ್ ಟೆಕ್ನಾಲಜಿಯ ಎಎನ್ಪಿಆರ್ ಕ್ಯಾಮೆರಾ ಅಳವಡಿಕೆಗೆ ಮುಂದಾಗಿದೆ. ಈ ಕ್ಯಾಮೆರಾಗೆ ಆರ್ಟಿಫಿಷಿಯಲ್ ಪ್ರೋಗ್ರಾಮಿಂಗ್ ಅಳವಡಿಕೆ ಮಾಡಲಾಗಿದ್ದು, ವಾಹನ ಸವಾರರು ಹೈವೇಯ ಸ್ಪೀಡ್ ಲಿಮಿಟ್ ಅನ್ನು ಮೀರಿದರೆ, ಅವರ ಮನೆಗೆ ಅತಿವೇಗದ ಚಾಲನೆ ಅಡಿ ಪ್ರಕರಣ ದಾಖಲಾಗಿ ನೋಟಿಸ್ ಕೈ ಸೇರಲಿದೆ. ಇದನ್ನೂ ಓದಿ: ಅನುಕಂಪದ ಅಲೆಯ ಅಬ್ಬರ – ಟಿಕೆಟ್ ರೇಸ್ನಿಂದ ಹಿಂದೆ ಸರಿದ ಹೆಚ್.ಸಿ.ಮಹದೇವಪ್ಪ
ಈ ಕ್ಯಾಮೆರಾ ಕೇವಲ ಸ್ಪೀಡ್ ಕಂಟ್ರೋಲ್ಗೆ ಸಹಕಾರಿ ಅಷ್ಟೇ ಅಲ್ಲದೆ, ಇತ್ತೀಚೆಗೆ ಹೈವೇಯಲ್ಲಿ ಹೆಚ್ಚಾಗಿರುವ ಕಳ್ಳತನ ಪ್ರಕರಣಗಳನ್ನು ಕೂಡ ತಡೆಯಲು ಸಹಕಾರಿಯಾಗಲಿವೆ. ಅಲ್ಲದೆ ಮಾರ್ಗ ಮಧ್ಯ ಯಾವುದಾದರೂ ಅಪಘಾತ ಸಂಭವಿಸಿದರೇ ಹತ್ತಿರದಲ್ಲಿರುವ ಅಂಬುಲೆನ್ಸ್ ಸರ್ವೀಸ್, ಹೆದ್ದಾರಿ ಪೊಲೀಸರು, ಹೆದ್ದಾರಿ ಅಧಿಕಾರಿಗಳಿಗೂ ಮಾಹಿತಿ ರವಾನಿಸುವ ಟೆಕ್ನಾಲಜಿ ಹೊಂದಿರಲಿದೆ. ಸದ್ಯ ಈ ಎಲ್ಲ ಟೆಕ್ನಾಲಜಿ ಅಳವಡಿಕೆಗೆ ಡಿಪಿಆರ್ ಸಲ್ಲಿಕೆಯಾಗಿದ್ದು, ಮುಂದಿನ 6, 7ತಿಂಗಳಲ್ಲಿ ಸಂಪೂರ್ಣ ಅಳವಡಿಕೆ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಅನ್ಯಕೋಮಿನವರ ವ್ಯಾಪಾರಕ್ಕೆ ನಿರ್ಬಂಧ ಹೇರಿ – ಈಗ ಕಿಗ್ಗಾದಲ್ಲೂ ಧರ್ಮ ದಂಗಲ್