ಶಿವಮೊಗ್ಗ: ಹೆಬ್ಬುಲಿ ಚಿತ್ರದ ಹೀರೋ ಕಿಚ್ಚ ಸುದೀಪ್ ಓದಿದ ಶಿವಮೊಗ್ಗದ ವಾಸವಿ ಶಾಲೆಯಲ್ಲಿ ಹೆಬ್ಬುಲಿ ಕಟಿಂಗ್ ವಿವಾದಕ್ಕೆ ಕಾರಣವಾಗಿದೆ.
ಈ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಯೊಬ್ಬ ಹೆಬ್ಬುಲಿ ಕಟಿಂಗ್ ಮಾಡಿಸಿಕೊಂಡು ಬಂದಿದ್ದ. ಪ್ರಾರ್ಥನೆ ವೇಳೆ ಇದನ್ನು ಗಮನಿಸಿದ ದೈಹಿಕ ಶಿಕ್ಷಕರೊಬ್ಬರು ಈ ಬಾಲಕನಿಗೆ ಪೆಟ್ಟು ನೀಡಿದ್ದಾರೆ. ನಂತರ ಎರಡು ದಿನಗಳ ನಂತರ ತಲೆನೋವು ಎಂದ ಬಾಲಕನನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿಸಲಾಗಿತ್ತು. ಅಲ್ಲಿ ಆ ಬಾಲಕನ ಸಿಟಿ ಸ್ಕ್ಯಾನ್ ಮಾಡಿದಾಗ ಯಾವುದೇ ತೊಂದರೆ ಇಲ್ಲ ಎಂದು ತಿಳಿದು ಬಂದಿದೆ.
ಆದರೆ ಬಾಲಕನಿಗೆ ಶಾಲೆಯಲ್ಲಿ ಶಿಕ್ಷಕರು ಹೊಡೆದಿದ್ದಾರೆ ಎಂದು ಎಂಎಲ್ಸಿ ಪ್ರಕರಣ(ಮೆಡಿಕೋ ಲೀಗಲ್ ಕೇಸ್) ದಾಖಲಾಗಿದೆ. ಈ ಬಗ್ಗೆ ಬಾಲಕನ ತಂದೆ ಪ್ರತಿಕ್ರಿಯಿಸಿ, ನಮ್ಮದೂ ತಪ್ಪಿದೆ. ಆದರೆ ಬಾಲಕನಿಗೆ ಈ ಮುಂಚೆಯೇ ಅಪಘಾತಕ್ಕೀಡಾಗಿ ತಲೆ ಭಾಗಕ್ಕೆ ಪೆಟ್ಟಾಗಿತ್ತು. ಅದೇ ಭಾಗಕ್ಕೆ ಶಿಕ್ಷಕರು ಹೊಡೆದಿದ್ದು ನಮಗೆ ಆತಂಕ ಮೂಡಿಸಿತ್ತು. ಶಿಕ್ಷಕರು ಮಕ್ಕಳಲ್ಲಿ ಶಿಸ್ತು ಬೆಳೆಸಲು ಪೆಟ್ಟು ಕೊಡಲಿ. ಆದರೆ ಮಕ್ಕಳ ಸ್ಥಿತಿಗತಿ ಯೋಚಿಸಲಿ ಎಂದಿದ್ದಾರೆ.
ಆಡಳಿತ ಮಂಡಳಿಯವರೂ ಸಹ ಪ್ರತಿಕ್ರಿಯೆ ನೀಡಿದ್ದು, ಹೇರ್ ಸ್ಟೈಲ್, ಉಗುರು, ಯೂನಿಫಾರಂ ಇಂಥ ವಿಷಯಗಳ ಶಿಸ್ತು ಇರಲಿ ಎಂಬ ಕಾರಣಕ್ಕೆ ಪೆಟ್ಟು ಕೊಡುವುದು ಸಹಜ. ಆದರೆ ಇದರಿಂದ ಬಾಲಕನ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದಿದ್ದಾರೆ.