ಬೆಂಗಳೂರು: ಕೊರೊನಾ ಆತಂಕದ ನಡುವೆ ಸೋಮವಾರ ವರುಣದೇವ ಅಬ್ಬರಿಸಿದ್ದಾರೆ. ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗಿದ್ದು, ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕೆರೆಕತ್ತಿಗನೂರು ಗ್ರಾಮದಲ್ಲಿ ರಾತ್ರಿ ಬಿರುಗಾಳಿ ಸಹಿತ ಭಾರೀ ಆಲಿಕಲ್ಲು ಮಳೆಯಾಗಿದೆ.
ಮಳೆಯಿಂದಾಗಿ ಕೆರೆಕತ್ತಿಗನೂರು ಇಡೀ ಗ್ರಾಮ ಕೆರೆಯಂತಾಗಿದೆ. ಸೂಕ್ತ ಒಳಚರಂಡಿ ವ್ಯವಸ್ಥೆ ನಿರ್ವಹಣೆಯಿಲ್ಲದೆ ಹಳ್ಳಕೊಳ್ಳ ತುಂಬಿಕೊಂಡಿವೆ. ಆದರೆ ಒಂದೇ ದಿನದ ಮಳೆಯಿಂದ ಜನರಲ್ಲಿ ಮಂದಹಾಸ ಮೂಡಿದೆ. ಒಂದು ಕಡೆ ರೈತರು ಕೃಷಿ ಚಟುವಟಿಕೆ ಮುಂದಾಗುವ ಸಿದ್ಧತೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಮೊದಲ ಮಳೆಗೆ ಈ ರೀತಿ ಹಳ್ಳಕೊಳ್ಳ ತುಂಬಿಕೊಂಡರೆ, ಮುಂದೆ ಮಳೆ ಬಂದರೆ ಪರಿಸ್ಥಿತಿ ಹೇಗೆ ಎಂಬ ಆತಂಕ ಎದುರಾಗಿದೆ.
ಸಂಬಂಧಪಟ್ಟ ಇಲಾಖೆ ಸೂಕ್ತ ರೀತಿ ಒಳಚರಂಡಿ ವ್ಯವಸ್ಥೆ ನಿರ್ವಹಣೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇತ್ತ ಆಲಿಕಲ್ಲು ಮಳೆ ಮಾವು ಬೆಳೆಗಾರರಲ್ಲಿ ಆತಂಕ ಮೂಡಿದೆ. ಇಂದಿನಿಂದ ಎರಡು ದಿನ ಭಾರೀ ಮಳೆಯಾಗಲಿದ್ದು, 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.