ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಂದು ದೆಹಲಿ ಆಗುತ್ತಿದ್ಯಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ದೆಹಲಿ ವಾತಾವರಣದಂತೆ ಬೆಂಗಳೂರು ಕೂಡ ಬದಲಾಗುತ್ತಿದೆ. ಬೆಂಗಳೂರಿನ ವಾತಾವರಣದ ಜೊತೆಗೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಬಿಸಿಲಿನ ಏರುಪೇರು ಮತ್ತು ವಾತಾವರಣದ ಬದಲಾವಣೆಯಿಂದ ಅಸ್ತಮ ಕಾಯಿಲೆ ಜನರನ್ನು ಕಾಡುತ್ತಿದೆ.
ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ರಾಜ್ಯದ ವಾತಾವರಣದಲ್ಲಿ ಭಾರೀ ಬದಲಾವಣೆಯಾಗುತ್ತಿದೆ. ಬೆಳಗ್ಗೆ ಚಳಿ, ಮಧ್ಯಾಹ್ನ ಬಿಸಿಲು ಮತ್ತು ರಾತ್ರಿ ಚಳಿ ಜಾಸ್ತಿಯಾಗುತ್ತಿದೆ. ಇತ್ತೀಚೆಗೆ ಬಿಸಿಲಿನ ತಾಪ ಹೆಚ್ಚಾಗಿದ್ದು, ವಾತಾವರಣದ ವಾಯು ಮಾಲಿನ್ಯದಿಂದಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗ್ತಿವೆ. ಆಸ್ಪತ್ರೆಗಳ ಮುಂದೆ ರೋಗಿಗಳ ಕ್ಯೂ ಹೆಚ್ಚಾಗ್ತಿದೆ. ವಾಯು ಮಾಲಿನ್ಯದಿಂದ ಅಸ್ತಮಾ ಕಾಯಿಲೆ ಜಾಸ್ತಿ ಆಗ್ತಿದ್ದು, ಬೆಂಗಳೂರಿನ ವಾಯುಮಾಲಿನ್ಯ ದೆಹಲಿ ರೀತಿ ಆಗದಂತೆ ಎಚ್ಚರ ವಹಿಸಬೇಕು ಎಂದು ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನ ವಾಯು ಮಾಲಿನ್ಯಕ್ಕೆ ಕಾರಣ ಟ್ರಾಫಿಕ್ ಸಮಸ್ಯೆ, ವಾಹನಗಳ ಸಂಖ್ಯೆ ಹೆಚ್ಚಳ, ಮರಗಳ ನಾಶ ಮತ್ತು ಫ್ಯಾಕ್ಟರಿಗಳಿಂದ ಬರುವ ವಿಷಾನಿಲ ಎನ್ನಲಾಗುತ್ತಿದೆ. ಪ್ರತಿ ತಿಂಗಳಿಗೆ ಅಸ್ತಮಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಾಂಕ್ರಾಮಿಕ ರೋಗಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಜನರ ಕ್ಯೂ ಜಾಸ್ತಿಯಾಗಿದೆ.
ವಾತಾವರಣ ಏರುಪೇರಿಂದ ಸಾಂಕ್ರಾಮಿಕ ರೋಗಕ್ಕೆ ತುತ್ತಾದವರ ಸಂಖ್ಯೆ ನೋಡೋದಾದ್ರೆ;
1. ಡಿಸೆಂಬರಿನಲ್ಲಿ ಅಸ್ತಮಾ ರೋಗಿಗಳ ಸಂಖ್ಯೆ 300
2. ಜನವರಿಯಲ್ಲಿ ಅಸ್ತಮಾ ರೋಗಿಗಳ ಸಂಖ್ಯೆ 350
3. ಫೆಬ್ರವರಿಯಲ್ಲಿ ಇದರ ಸಂಖ್ಯೆ 550ಕ್ಕೆ ಹೆಚ್ಚಳ
ವಾತಾವರಣದಲ್ಲಿ ಬದಲಾವಣೆ ಮತ್ತು ಬಿಸಿಲು ಹೆಚ್ಚಾದಂತೆ ಈ ಕಾಯಿಲೆಗಳು ಹೆಚ್ಚಾಗ್ತಿವೆ. ಇದರಿಂದ ಪಾರಾಗಲು ವಾಹನಗಳ ಸಂಖ್ಯೆ ಕಡಿಮೆ ಮಾಡಬೇಕು, ಮರ ಗಿಡಗಳನ್ನು ಬೆಳೆಸಬೇಕು, ಜೊತೆಗೆ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಬೇಕು ಇಲ್ಲವೆಂದರೆ ದೆಹಲಿ ರೀತಿ ಆಗುವುದು ಬೇಡಾ ಎಂದು ವೈದ್ಯರು ಹೇಳುತ್ತಾರೆ.
ರಾಜ್ಯದಲ್ಲಿ ಜನವರಿಯಲ್ಲಿ ಆದ ರಥ ಸಪ್ತಮಿ ಬಳಿಕ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಸೂರ್ಯ ಉತ್ತರಾಯಣದ ಕಡೆ ಪಯಣ ಮಾಡುತ್ತಿರುವ ಹಿನ್ನೆಲೆ ಬಿಸಿಲಿನ ತಾಪ ಜಾಸ್ತಿ ಇರಲಿದೆಯಂತೆ. ಮಾರ್ಚ್ ಅಷ್ಟೋತ್ತಿಗೆ ಸೂರ್ಯ ಸಮಭಾಜಕ ವೃತ್ತದ ಬಳಿಗೆ ಬರಲಿದ್ದು ಬಿಸಿಲು ಜಾಸ್ತಿ ಆಗುವುದರಿಂದ ಸಾಂಕ್ರಾಮಿಕ ರೋಗಗಳು ಜಾಸ್ತಿ ಆಗಲಿದೆ ಎಂದು ಭೂ ಗರ್ಭ ಶಾಸ್ತ್ರಜ್ಞರು ತಿಳಿಸಿದರು.
ರಥಸಪ್ತಮಿ ಬಳಿಕ ಬಿಸಿಲಿನ ತಾಪದಲ್ಲಿ ಆದ ಬದಲಾವಣೆಯನ್ನು ನೋಡೋದಾದರೆ;
1. ಡಿಸೆಂಬರಿನಲ್ಲಿ ಬಿಸಿಲಿನ ತಾಪಮಾನ 25 ಡಿಗ್ರಿ ಸೆಲ್ಸಿಯಸ್
2. ಜನವರಿ ಬಿಸಿಲಿನ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಆಗಿದೆ
3. ಫೆಬ್ರವರಿಯಲ್ಲಿ ಇದರ ಪ್ರಮಾಣ 36ಕ್ಕೆ ಏರಿಕೆ
4. ಮಾರ್ಚ್ನಲ್ಲಿ ಇನ್ನೂ ಜಾಸ್ತಿಯಾಗುವ ಸಾಧ್ಯತೆ ಇದೆ