ರಾಮನಗರ: ಪ್ರೀತಿಸಿ ಮದುವೆಯಾದರು ಎಂಬ ಒಂದೇ ಕಾರಣಕ್ಕೆ ಬಾವನನ್ನೇ ಬಾಮೈದ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ (Murder) ಘಟನೆ ರಾಮನಗರ (Ramanagara) ತಾಲೂಕಿನ ಕೆಜಿ ಹೊಸಹಳ್ಳಿ (K.G.Hosahalli) ಗ್ರಾಮದಲ್ಲಿ ನಡೆದಿದೆ.
ಕೆಜಿ ಹೊಸಹಳ್ಳಿ ಗ್ರಾಮದ ಅಶ್ವತ್ಥ್ ಗೌಡ(28) ಕೊಲೆಯಾದ ದುರ್ದೈವಿ. ಕೆಜಿ ಹೊಸಳ್ಳಿ ಗ್ರಾಮದ ಅಶ್ವತ್ಥ್ ಗೌಡ ಹಾಗೂ ಚನ್ನಪಟ್ಟಣ (Channapatna) ನಗರದ ಮಹದೇಶ್ವರ ಬಡಾವಣೆಯ ಸಹನಾ, ದೂರದ ಸಂಬಂಧಿಗಳು. ಅಲ್ಲದೇ ಒಂದೇ ಜಾತಿಯವರಾಗಿದ್ದರು. ಹೀಗಾಗಿ ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಯ (Love) ವಿಚಾರ ಎರಡೂ ಕುಟುಂಬದವರಿಗೂ ಗೊತ್ತಿತ್ತು. ವಿರೋಧದ ನಡುವೆ ಕಳೆದ ಎರಡು ತಿಂಗಳ ಹಿಂದೆ ಅಶ್ವತ್ಥ್ ಹಾಗೂ ಸಹನಾ ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು. ನಂತರ ಇಬ್ಬರೂ ಕೂಡ ಕೆಜಿ ಹೊಸಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದರು. ಇದನ್ನೂ ಓದಿ: 4 ವರ್ಷದ ಪ್ರೀತಿಗೆ ಎಳ್ಳುನೀರು- ರೊಚ್ಚಿಗೆದ್ದು ಅಪ್ರಾಪ್ತ ಪ್ರಿಯತಮೆಗೆ ಚಾಕು ಇರಿದ!
ಮಂಗಳವಾರ ರಾಮನಗರದಲ್ಲಿ ಬೀಗರ ಔತಣಕೂಟಕ್ಕೆ ಹೋಗಿ ವಾಪಸ್ ಬರುವ ವೇಳೆ ಕೆಜಿ ಹೊಸಹಳ್ಳಿ ಗ್ರಾಮದಲ್ಲಿ ಅಶ್ವತ್ಥ್ ಮನೆಯಿಂದ ಕೂಗಳತೆ ದೂರದಲ್ಲಿ ಹಿಪ್ಪುನೇರಳೆ ಗಿಡಗಳ ಮಧ್ಯದಲ್ಲಿ ಹೊಂಚು ಹಾಕಿ ಕುಳಿತಿದ್ದ ಸಹನಾಳ ಸಹೋದರ ಭರತ್ ಮತ್ತು ಗ್ಯಾಂಗ್ ಏಕಾಏಕಿ ದಾಳಿ (Attack) ನಡೆಸಿದೆ. ರಾಮನಗರದಿಂದ ಬರುವುದನ್ನೇ ಕಾದು ಬೈಕ್ನಲ್ಲಿ ಹಿಂದಿನಿಂದ ಬಂದು ಮೊದಲಿಗೆ ಸಹನಾಳನ್ನು ತಳ್ಳಿದ್ದಾರೆ. ಇದರಿಂದಾಗಿ ಆಕೆ ಕೆಳಗೆ ಬಿದ್ದಿದ್ದಾಳೆ. ನಂತರ ಅಶ್ವತ್ಥ್ ಮೇಲೆ ದಾಳಿ ನಡೆಸಲು ಮುಂದಾಗಿದ್ದಾರೆ.
ಸ್ವಲ್ಪ ದೂರಕ್ಕೆ ಅಶ್ವತ್ಥ್ ಓಡಿ ಹೋಗಿದ್ದಾನೆ. ನೆಲಕ್ಕೆ ಬೀಳುತ್ತಿದ್ದಂತೆ ಮಾರಕಾಸ್ತ್ರಗಳಿಂದ ಕೊಚ್ಚಿದ್ದಾರೆ. ಅನಂತರ ಅಲ್ಲೇ ಇದ್ದ ಸೈಜ್ಗಲ್ಲನ್ನು ಆತನ ತಲೆಮೇಲೆ ಎತ್ತಿ ಹಾಕಿದ್ದಾರೆ. ಹೀಗಾಗಿ ಅಶ್ವತ್ಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಲ್ಲದೇ ಬಿಡಿಸಲು ಹೋದ ಸಹನಾ ಮೇಲೂ ಕೂಡ ದಾಳಿ ಮಾಡಿದ್ದಾರೆ. ಗ್ರಾಮಸ್ಥರು ಬರುತ್ತಿದ್ದಂತೆ ಎರಡು ಬೈಕ್ಗಳಲ್ಲಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಬೀದಿ ನಾಯಿಗಳ ದಾಳಿ – ಅಪ್ರಾಪ್ತ ಬಾಲಕ ಮೃತ್ಯು
ಆರೋಪಿ ಭರತ್ ಸಹನಾಳಿಗೆ ಮಲತಾಯಿ ಮಗ. ಭರತ್ನ ತಾಯಿ ತೀರಿ ಹೋದ ನಂತರ ಆತನ ತಂದೆ ಸಹನಾಳ ತಾಯಿಯನ್ನು ಮದುವೆಯಾಗಿದ್ದರು. ಇವರು ಸಾಕಷ್ಟು ಸಿರಿವಂತರಾಗಿದ್ದರು. ಚನ್ನಪಟ್ಟಣದಲ್ಲಿ ಕಾರು ವಾಷಿಂಗ್ ಸೆಂಟರ್ ಸಹಾ ಇದೆ. ಆದರೆ ಭರತ್ಗೆ ಮೊದಲಿನಿಂದಲೂ ಸಹನಾಳ ಮೇಲೆ ದ್ವೇಷವಿತ್ತು. ಸಹನಾ ಮತ್ತು ಅಶ್ವತ್ಥ್ ಮದುವೆಯಾಗಲು ಕೂಡ ಭರತ್ನ ವಿರೋಧವಿತ್ತು. ಹೀಗಾಗಿ ಚನ್ನಪಟ್ಟಣ ಠಾಣೆಯಲ್ಲಿ ದೂರು ಸಹಾ ನೀಡಿದ್ದ. ಪೊಲೀಸರ ಮುಂದೆ ಹೇಳಿಕೆ ಸಹಾ ಕೊಟ್ಟಿದ್ದರು. ರಾಜಿ ಪಂಚಾಯತಿ ಕೂಡ ನಡೆದಿತ್ತು.
ಸಹನಾ ನನಗೆ ನಿಮ್ಮ ಆಸ್ತಿ ಬೇಡವೆಂದು ಬರೆದುಕೊಟ್ಟಿದ್ದಳು. ಆದರೂ ಸಹಾ ಆಸ್ತಿ (Property) ಎಲ್ಲಿ ಕೈತಪ್ಪುತ್ತದೆಯೋ ಎಂದು ಪ್ಲಾನ್ ಮಾಡಿದ ಭರತ್ ತನ್ನ ಜೊತೆ ಇಬ್ಬರನ್ನು ಕರೆದುಕೊಂಡು ಬಂದು ಅಶ್ವತ್ಥ್ ಮೇಲೆ ದಾಳಿ ಮಾಡಿ ಕೊಲೆಗೈದಿದ್ದಾನೆ. ಅಶ್ವತ್ಥ್ನ ಚಲನವಲನಗಳ ಬಗ್ಗೆ ಕಳೆದ ಹಲವು ದಿನಗಳಿಂದ ಮಾಹಿತಿ ಪಡೆದಿದ್ದಾನೆ. ಅಲ್ಲದೇ ಮಂಗಳವಾರ ರಾಮನಗರಕ್ಕೆ ಹೋಗಿರುವುದು ಮತ್ತು ಬರುವ ಸಮಯವನ್ನು ತಿಳಿದುಕೊಂಡು ಅಶ್ವತ್ಥ್ನ ಮನೆಯ ಸಮೀಪವೇ ಹತ್ಯೆ ಮಾಡಿದ್ದಾನೆ. ಹತ್ಯೆಗೂ ಕೆಲವೇ ದೂರದಲ್ಲಿ ಅಶ್ವತ್ಥ್ನ ತಂದೆ ತಾಯಿ ಸಹಾ ಬರುತ್ತಿದ್ದರು. ಒಟ್ಟಿಗೆ ಬಂದಿದ್ದರೆ ಅಟ್ಯಾಕ್ ಮಾಡುವುದು ಕಷ್ಟವಾಗುತ್ತಿತ್ತು. ಆದರೆ ಇಬ್ಬರು ಎನ್ಫೀಲ್ಡ್ ಬೈಕ್ನಲ್ಲಿ ಬರುತ್ತಿರುವುದನ್ನು ಮಾಹಿತಿ ಪಡೆದು ಏಕಾಏಕಿ ದಾಳಿ ನಡೆಸಿ ಕೊಲೆಗೈದಿದ್ದಾನೆ. ಇದನ್ನೂ ಓದಿ: ಸ್ಕ್ರೂಡ್ರೈವರ್ನಲ್ಲಿ ಪತ್ನಿಯ ಕತ್ತು, ಎದೆಗೆ ಚುಚ್ಚಿ ಕೊಲೆಗೆ ಮುಂದಾದ ಪತಿ!
ಕೊಲೆ ವಿಚಾರ ತಿಳಿಯುತ್ತಿದ್ದಂತೆ ಇಡೀ ಗ್ರಾಮದ ಜನರೇ ಸ್ಥಳದಲ್ಲಿ ನೆರೆದಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಆರೋಪಿಗಳಿಗೆ ಸಹಾಯ ಮಾಡಿದವರನ್ನು ಸ್ಥಳಕ್ಕೆ ಕರೆಸಿ ಎಂದು ಮೃತದೇಹವನ್ನು ಎತ್ತಲು ಬಿಡದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸಮಾಧಾನ ಪಡಿಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ದಾಳಿಯಲ್ಲಿ ಗಾಯಗೊಂಡಿರುವ ಸಹನಾ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ (Distrcit Hospital) ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ನಂತರ ಕೊಲೆ ಮಾಡಿದ ಭರತ್ ಸೇರಿ ಮೂವರು ಆರೋಪಿಗಳನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಒಟ್ಟಾರೆಯಾಗಿ ಸಹೋದರಿ ಪ್ರೀತಿಸಿ ಮದುವೆಯಾದಳು. ಆಸ್ತಿ ನನಗೆ ಸಿಗುವುದಿಲ್ಲ ಎಂಬ ಕಾರಣಕ್ಕೆ ತನ್ನ ಬಾವನನ್ನೇ ಭೀಕರವಾಗಿ ಹತ್ಯೆ ಮಾಡಿ ತಂಗಿಯ ಬಾಳನ್ನು ಕತ್ತಲೆಗೆ ನೂಕಿದ್ದಾನೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಆರೋಪ- IAS ಅಧಿಕಾರಿ ವಿರುದ್ಧ ಪತ್ನಿಯಿಂದ ದೂರು