ಹಾಸನ: ಬಿಜೆಪಿ ವಿರುದ್ಧ ಹಿಂದೂ ಮುಸ್ಲಿಂ, ಕ್ರಿಶ್ಚಿಯನ್ನರು ಒಂದಾಗಬೇಕು ಎಂದು ಮಾಜಿ ಪ್ರಧಾನಿ ಹೆಚ್ ದೇವೇಗೌಡ ಕರೆ ನೀಡಿದ್ದಾರೆ.
ಹಾಸನದಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲ ಬಿಜೆಪಿ ನಾಯಕರು ಮಹಾತ್ಮ ಗಾಂಧೀಜಿ ಬಗ್ಗೆ ಆಡುವ ಮಾತು ಕೇಳಿದರೆ ನಮ್ಮ ಕರುಳು ಕತ್ತರಿಸಿ ಬರುತ್ತೆ. ರಾಜಕೀಯದಲ್ಲಿ ಅಧಿಕಾರ ಬರುತ್ತೆ ಹೋಗುತ್ತೆ ಅದೇ ಶಾಶ್ವತ ಅಲ್ಲ. ಹಿಂದೂ ರಾಷ್ಟ್ರ ತರುತ್ತೇವೆ ಎಂದು ಉದ್ಧಟತನದಿಂದ ಮಾತನಾಡುತ್ತಾರೆ. ಇದನ್ನು ತಡೆಯುವ ಶಕ್ತಿ ಇರೋದು ಮಹಾಜನತೆಗೆ ಮಾತ್ರ ಎಂದರು.
ಬಿಜೆಪಿ ವಿರುದ್ಧ ಹಿಂದು ಮುಸ್ಲಿಂ, ಕ್ರಿಶ್ಚಿಯನ್ನರು ಒಂದಾಗಬೇಕು. ಸುಪ್ರೀಂಕೋರ್ಟ್ ಕೂಡ ಈ ದಿನಗಳಲ್ಲಿ ಬಲ ಕಳೆದುಕೊಳ್ಳುತ್ತಿದೆ ಎಂಬ ಭಯ ನನ್ನನ್ನು ಕಾಡುತ್ತಿದೆ. ನಾನೇನು ಕಾನೂನು ಪಂಡಿತನಲ್ಲ ಆದರೆ ಪರಿಸ್ಥಿತಿ ನೋಡಿ ಹಾಗನ್ನಿಸುತ್ತಿದೆ ಎಂದು ದೇವೇಗೌಡರು ಆತಂಕ ವ್ಯಕ್ತಪಡಿಸಿದರು. ನಾವೆಲ್ಲರೂ ಒಟ್ಟು ಸೇರಿ ಸಿಎಎ, ಎನ್.ಆರ್.ಸಿ ಮತ್ತು ಎನ್.ಆರ್.ಪಿ ಕಾನೂನುಗಳನ್ನ ವಿರೋಧಿಸಬೇಕು. ನಮ್ಮ ದೇಶದಲ್ಲಿ ವಿವಿಧ ಜಾತಿ ಜನಾಂಗದವರು ವಾಸವಿದ್ದಾರೆ ತಿಳಿಸಿದರು.
ನರೇಂದ್ರ ಮೋದಿ ಮಾತನಾಡುವ ದಾಟಿಯಲ್ಲೇ ಹಿಂದೂ ರಾಷ್ಟ್ರ ಮಾಡುವಂತಿದೆ. ಅವರು ಅಂದುಕೊಂಡಿರುವುದು ಅಷ್ಟು ಸುಲಭವಾದುದ್ದಲ್ಲ. ಈ ಕಾಯ್ದೆಯಿಂದ ಕೇವಲ ಮುಸ್ಲಿಂರಿಗೆ ಮಾತ್ರವಲ್ಲ ಉಳಿದವರಿಗೂ ತೊಂದರೆಯಾಗುತ್ತದೆ. ಮಹಾತ್ಮ ಗಾಂಧೀಜಿಯನ್ನು ಕೊಲೆ ಮಾಡಿದವರಿಗೆ ಭಾರತ ರತ್ನ ನೀಡಬೇಕು ಎನ್ನುತ್ತಿದ್ದಾರೆ. ಲೋಕಸಭೆಯಲ್ಲಿ ಸಂಪೂರ್ಣ ಬೆಂಬಲ ಸಿಕ್ಕಿದ್ದೆ ಇದಕ್ಕೆ ಕಾರಣ. ಮೋದಿ ಆಡಳಿತದಲ್ಲಿ ಜಾತಿ ಜನಾಂಗದ ಘರ್ಷಣೆಗಳು ಹೆಚ್ಚಾಗಿವೆ ಎಂದು ಆಕ್ರೋಶ ಹೊರಹಾಕಿದರು.