ಹಾಸನ: ಹಾಸನಾಂಬೆ ದರ್ಶನೋತ್ಸವಕ್ಕೆ ಇಂದು 4ನೇ ದಿನವಾಗಿದೆ. ಆದರೆ ಸಾರ್ವಜನಿಕ ದರ್ಶನಕ್ಕೆ 3ನೇ ದಿನವಾದ ಇಂದು ಭಕ್ತರ ಆಗಮನದ ಸಂಖ್ಯೆ ತುಸು ಏರಿಕೆಯಾಗಿದೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಭಕ್ತರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇಲ್ಲ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿರುವ ಭಕ್ತರು ಸಲೀಸಾಗಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಪ್ರತಿ ವರ್ಷ ಭಾನುವಾರ ವೇಳೆ ಕಿಲೋ ಮೀಟರ್ ಗಟ್ಟಲೆ ಸಾಲು ಇರುತ್ತಿತ್ತು. ಆದರೆ ಈ ಬಾರಿ ಆ ರೀತಿಯ ಒತ್ತಡ ಏನಿಲ್ಲ. ಹೀಗಾಗಿ ಸುಲಭವಾಗಿ ದೇವಿಯ ದರ್ಶನ ಪಡೆಯಬಹುದಾಗಿದೆ.
ಬೆಳಗ್ಗೆ ಬಂದವರು, ಕೆಲವೇ ಗಂಟೆಗಳಲ್ಲಿ ಹಾಸನಾಂಬೆಯ ದರ್ಶನ ಪಡೆದು ಖುಷಿಯಿಂದ ಮನೆಗೆ ಮರಳಿದರು. ಮಧ್ಯಾಹ್ನ ನಂತರ ದೇವಾಲಯಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿತ್ತು. ಈ ಮಧ್ಯೆ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ನಿತ್ಯವೂ ಬಿಡೆನು ನಿನ್ನ ಪಾದ ಎಂಬಂತೆ ಹಾಸನಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಬಾಗಿಲು ತೆರೆದ ದಿನ 2ಬಾರಿ ದೇವಾಲಯಕ್ಕೆ ಭೇಟಿ ನೀಡಿದರೆ, ಉಳಿದ ದಿನ ಒಮ್ಮೊಮ್ಮೆ ದೇವಿಯನ್ನು ಕಂಡು ಕೈ ಮುಗಿದು ಹೋಗುತ್ತಿದ್ದಾರೆ.
ಆಶ್ವೀಜ ಮಾಸದ ಮೊದಲ ಗುರುವಾರ ಅಂದರೆ ನವೆಂಬರ್ 1 ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಗಿದೆ. ನವೆಂಬರ್ 1 ರಿಂದ 9ರ ವರೆಗೆ ಈ ವರ್ಷದ ಜಾತ್ರಾ ಮಹೋತ್ಸವ ನಡೆಯಲಿದ್ದು, ಮೊದಲ ಮತ್ತು ಅಂತಿಮ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ. ಇದರಿಂದಾಗಿ ಕೇವಲ 7 ದಿನ ಮಾತ್ರ ದೇವಿಯ ದರ್ಶನ ಸಿಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv